ನವೆಂಬರ್ 19ರಿಂದ 3 ದಿನಗಳ ಕಾಲ ತಿಪಟೂರಿನಲ್ಲಿ ಕಲ್ಪೋತ್ಸವ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಬೆಳಗ್ಗೆಯಿಂದ ಸಂಜೆಯವರಿಗೆ ಶಾಲಾ ಮಕ್ಕಳಿಗೆ, ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ, ನೌಕರರಿಗಾಗಿ ಹಲವು ಸ್ಪರ್ಧೆಗಳು, ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಎರಡು ದಿನಗಳ ಕಾಲ ಹೆಲಿಕ್ಯಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿಯ ಕಲ್ಪತರು ರತ್ನ ಪ್ರಶಸ್ತಿಯನ್ನು, ಹಿರಿಯ ನಟಿ, ಮಾಜಿ ಸಚಿವೆ
ಉಮಾಶ್ರೀ ಅವರಿಗೆ ನೀಡಲಾಗುತ್ತಿದೆ. ಪ್ರತಿ ನಿತ್ಯ ಸಂಜೆ ಖ್ಯಾತ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ತೆಂಗು ಮತ್ತು ಕೃಷಿ ವಸ್ತು ಪ್ರದರ್ಶನ, ಮಹಿಳೆಯರ ಬೈಕ್ ರ್ಯಾಲಿ, ಪಂಜಿನ ಮೆರವಣಿಗೆ, ಸಾಕು ಪ್ರಾಣಿಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ. ಇನ್ನು, ಅಕ್ಟೋಬರ್ 23ರಂದು ಕಲ್ಪೋತ್ಸವ ಲೋಗೋ ಬಿಡುಗಡೆ ಮಾಡಲಾಗುತ್ತಿದೆ.
ಈ ಬಗ್ಗೆ ನಗರದ ಕಂದಾಯ ಇಲಾಖೆಯ ಸಭಾಂಗಣದಲ್ಲಿ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರೀಕರ ಪೂರ್ವ ಭಾವಿ ಸಭೆ ಕರೆಯಲಾಗಿತ್ತು. ಕಲ್ಪೋತ್ಸವದ ಅದ್ಧೂರಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಪಕ್ಷಾತೀತವಾಗಿ ಭಾಗವಹಿಸುವಂತೆ, ಶಾಸಕ ಮತ್ತು ಸ್ವಾಗತ ಸಮಿತಿ ಅಧ್ಯಕ್ಷರಾದ ಕೆ. ಷಡಕ್ಷರಿ ಮನವಿ ಮಾಡಿದ್ದಾರೆ. ನವೆಂಬರ್ 19, 20, 21ರಂದು ನಡೆಯುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಮತ್ತು ನಶಿಸಿ ಹೋಗುತ್ತಿರುವ ಗ್ರಾಮೀಣ ಜಾನಪದ ಕಲೆಗಳ ಪೋಷಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಇನ್ನು, ಸಭೆಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಡಾ. ಜಿ.ಎಸ್. ಶ್ರೀಧರ್,
ಕಾರ್ಯದರ್ಶಿ ತಿಪಟೂರು ಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜು, ಸ್ಚಾಗತ ಸಮಿತಿ ಉಪಾಧ್ಯಕ್ಷ ವಿಜಯಕುಮಾರ್ ಉಪಸ್ಥಿತರಿದ್ದರು.