ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸತ್ಯಾಂಶ ಹೊರತರಲು ನ್ಯಾಯಾಂಗ ತನಿಖೆಗೆ ಆದೇಶಿಸಲು ಸಿದ್ಧವಾಗಿದೆ ಎಂದು ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಗೆ ತಿಳಿಸಿದರು.
ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ತಾಯಂದಿರ ಸಾವಿನ ಕುರಿತು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ವಿಧಾನಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ನಾನು ತಪ್ಪಿತಸ್ಥನೆಂದು ಕಂಡುಬಂದರೆ, ಯಾವುದೇ ಕ್ರಮವನ್ನು ಎದುರಿಸಲು ನಾನು ಸಿದ್ಧನಿದ್ದೇನೆ, ತಪ್ಪಿತಸ್ಥರನ್ನು ಉಳಿಸುವ ಪ್ರಶ್ನೆಯೇ ಇಲ್ಲ ಎಂದು ದಿನೇಶ್ ಹೇಳಿದರು. ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ನವೆಂಬರ್ 9, 10 ಮತ್ತು 11 ರಂದು ಒಟ್ಟು 34 ಸಿಸೇರಿಯನ್ ಹೆರಿಗೆಗಳನ್ನು ನಡೆಸಲಾಯಿತು. ಈ ಪೈಕಿ ಏಳು ಮಹಿಳೆಯರು ತೀವ್ರ ಅಸ್ವಸ್ಥರಾಗಿದ್ದರು ಮತ್ತು ಅವರಲ್ಲಿ ಐವರು ಸಾವನ್ನಪ್ಪಿದರು.
ಕೂಡಲೇ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೈದ್ಯರ ತಂಡವನ್ನು ಬಳ್ಳಾರಿಗೆ ಕಳುಹಿಸಲಾಯಿತು. ಈ ತಂಡವು ನವೆಂಬರ್ 14 ರಂದು ತನ್ನ ವರದಿಯನ್ನು ಸಲ್ಲಿಸಿತು, ಆಸ್ಪತ್ರೆಯಲ್ಲಿ ವೈದ್ಯರು ಎಲ್ಲಾ ನಿಯಮಗಳನ್ನು ಅನುಸರಿಸಿದ್ದಾರೆ ಮತ್ತು ಅವರ ಕಡೆಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ ಎಂದು ಕಂಡುಹಿಡಿದಿದೆ. ಸಿಸೇರಿಯನ್ ನಂತರ ತಾಯಂದಿರಿಗೆ ನೀಡಲಾದ ರಿಂಗರ್ಸ್ ಲ್ಯಾಕ್ಟೇಟ್ IV ದ್ರವದ ಪ್ರತಿಕೂಲ ಪರಿಣಾಮಗಳಿಂದ ಸಾವು ಸಂಭವಿಸಿದೆ ಎಂದು ದಿನೇಶ್ ಹೇಳಿದರು.
ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ್ದ ರಿಂಗರ್ ಲ್ಯಾಕ್ಟೇಟ್ ಐ.ವಿ ದ್ರಾವಣದ ಗುಣಮಟ್ಟ ಕಳಪೆ ಎಂಬ ವರದಿಗಳು 2023ರಲ್ಲೇ ಬಂದಿದ್ದವು. 192 ಬ್ಯಾಚ್ಗಳಲ್ಲಿ ಪೂರೈಕೆಯಾಗಿದ್ದ ಐ.ವಿ ದ್ರಾವಣವನ್ನು ಬಳಕೆಯಿಂದ ಹಿಂಪಡೆದು, ಪಶ್ಚಿಮ ಬಂಗಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು ಎಂದು ವಿವರ ನೀಡಿದರು. ಪಶ್ಚಿಮ್ ಬಂಗಾ ಕಂಪನಿಯು ಕೇಂದ್ರದ ಪ್ರಯೋಗಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಕೇಂದ್ರದ ಪ್ರಯೋಗಾಲವು ರಿಂಗರ್ ಲ್ಯಾಕ್ಟೇಟ್ ದ್ರಾವಣದ ಗುಣಮಟ್ಟ ಕಳಪೆಯಾಗಿಲ್ಲ ಎಂಬ ವರದಿ ನೀಡಿತ್ತು ಎಂದು ದಿನೇಶ್ ತಿಳಿಸಿದರು. ಕೇಂದ್ರದ ಪ್ರಯೋಗಾಲಯದ ವರದಿ ಬಂದ ಬಳಿಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಈ ದ್ರಾವಣವನ್ನು ರಾಷ್ಟ್ರೀಯ ಪ್ರಯೋಗಾಲಯ ಮತ್ತು ಪರೀಕ್ಷಾ ಮಾನ್ಯತಾ ಮಂಡಳಿ (ಎನ್ಎಬಿಎಲ್) ಮಾನ್ಯತೆ ಹೊಂದಿರುವ ಪ್ರಯೋಗಾಲಯಗಳು ಹಾಗೂ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಪ್ರಯೋಗಾಲಯಗಳಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿತ್ತು. 22 ಬ್ಯಾಚ್ಗಳ ದ್ರಾವಣವನ್ನು ಹಂತ ಹಂತವಾಗಿ ಬಳಕೆಗೆ ಪೂರೈಸಲಾಗಿತ್ತು. ಬಳ್ಳಾರಿ ಪ್ರಕರಣದ ಬಳಿಕವೂ ಪರೀಕ್ಷೆ ನಡೆಸಿದ್ದು, ದ್ರಾವಣ ಗುಣಮಟ್ಟದಿಂದ ಕೂಡಿದೆ ಎಂಬ ವರದಿ ಬಂದಿದೆ’ ಎಂದರು.