ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತಗ್ಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದ ನಂತರ ಇದೀಗ ರಾಜ್ಯ ಹೈಕೋರ್ಟ್ ತನ್ನ ಆವರಣದೊಳಗೆ ಕಕ್ಷಿದಾರರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಹೌದು, ಹೈಕೋರ್ಟ್ ಕಲಾಪ, ಪ್ರವೇಶ ಮತ್ತು ಅರ್ಜಿಗಳ ವಿಚಾರಣೆ ಸೇರಿದಂತೆ ರಾಜ್ಯ ಹೈಕೋರ್ಟ್ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ನೂತನ ಮಾರ್ಗಸೂಚಿ ಆಧಾರದ ಮೇಲೆ ಸೆ.01ರಿಂದ ಹೈಕೋರ್ಟ್ ಕಲಾಪಗಳಿಗೆ ಕಕ್ಷೀದಾರರು ಹಾಜರಾಗಬಹುಗಿದೆ. ಬೆಂಗಳೂರು, ಕಲಬುರಗಿ ಮತ್ತು ಧಾರವಾಡದ ಹೈಕೋರ್ಟ್ ನ್ಯಾಯಪೀಠಗಳಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ.
ಇನ್ನು ಕೊರೋನಾ ಸೋಂಕು ಕ್ಷಿಪ್ರ ಗತಿಯಲ್ಲಿ ಹರಡುತ್ತಿದ್ದರಿಂದ ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಕೇವಲ ಆನ್ ಲೈನ್ ನಲ್ಲಿ ಕಲಾಪಗಳು ನಡೆಯುತ್ತಿದ್ದವು. ಬಳಿಕ ಹಂತಹಂತವಾಗಿ ಇತರೆ ಕೋರ್ಟ್ ಗಳಲ್ಲಿ ಭೌತಿಕ ಕಲಾಪಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದ್ರೆ ಇದೀಗ ಹೈಕೋರ್ಟ್ ಕಲಾಪಗಳೂ ಎಂದಿನಂತೆ ನಡೆಯಲಿದ್ದು, ಹೊಸ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸಿಬ್ಬಂದಿ ಹಾಗೂ ಕಕ್ಷಿದಾರ ವರ್ಗಕ್ಕೆ ತಿಳಿಸಲಾಗಿದೆ. ಇದರಿಂದಾಗಿ ಇತ್ಯರ್ಥವಾಗದೆ ಬಾಕಿ ಉಳಿದಿರೋ ಅದೆಷ್ಟೋ ಅರ್ಜಿಗಳು ಇತ್ಯರ್ಥವಾಗಲಿವೆ.