ಕನ್ನಡ ಚಿತ್ರರಂಗದ ಮಹಾನ್ ಸಿನಿಮಾಗಳಲ್ಲಿ ಒಂದು ಕಸ್ತೂರಿ ನಿವಾಸ. 1971ರ ಜನವರಿ 29ರಂದು ಬೆಳ್ಳಿತೆರೆಯಲ್ಲಿ ಹೊಸ ದಾಖಲೆ ಬರೆದ ಈ ಸಿನಿಮಾ ತೆರೆಗೆ ಬಂದು ಇಂದಿಗೆ 50 ವರ್ಷ. ಡಾ.ರಾಜ್ ಕುಮಾರ್ ಅವರ ವೃತ್ತಿ ಬದುಕಿನ ಮಹತ್ವದ ಚಿತ್ರಗಳಲ್ಲೊಂದಾದ ಕಸ್ತೂರಿ ನಿವಾಸ. ಜಯಂತಿ, ಕೆ.ಎಸ್.ಅಶ್ವಥ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ ಈ ಸಿನಿಮಾಕ್ಕೆ ಸುವರ್ಣ ಸಂಭ್ರಮ.

ಭಗವಾನ್ ಚಿತ್ರಕಥೆ ರಚಿಸಿ, ನಿರ್ದೇಶಿಸಿ ಈ ಸಿನಿಮಾಗೆ 3 ಲಕ್ಷ 25 ಸಾವಿರ ಹಣ ನೀಡಿದವರು ಕೆ.ಸಿ.ಎನ್.ಗೌಡ್ರು. ಕೇವಲ 19 ದಿನಗಳ ಅವಧಿಯಲ್ಲಿ ಶೂಟಿಂಗ್ ಮುಗಿಸಿದ ಕಸ್ತೂರಿ ನಿವಾಸ ಚಿತ್ರವನ್ನು ಕಲರ್ ನಲ್ಲಿ ಚಿತ್ರಿಸಬೇಕು ಎನ್ನುವ ಆಶಯ ಗೌಡರದ್ದು. ಆ ಸಮಯದಲ್ಲಿ ಡಾ.ರಾಜ್ ಕಲರ್ ಚಿತ್ರಕ್ಕೆ ದುಪ್ಪಟ್ಟು ಹಣ ಖರ್ಚು ಮಾಡುವ ಬದಲು ಬ್ಲಾಕ್ ಅಂಡ್ ವೈಟ್ ನಲ್ಲಿಯೇ ಇರುವಂತೆ ಹೇಳಿದ್ದರಂತೆ ಅಣ್ಣಾವ್ರು.
ಈ ಸಿನಿಮಾವನ್ನು ಕಾಲಿವುಡ್ ಚಿತ್ರಸಾಹಿತಿ ಜಿ.ಬಾಲಸುಬ್ರಹ್ಮಣ್ಯಂ ಅವರು ಶಿವಾಜಿ ಗಣೇಶನ್ ಅವರಿಗೆಂದು ಬರೆದ ಕತೆಯಿದು. ಶಿವಾಜಿ ಗಣೇಶನ್ ಅವರಿಗೆ ಕತೆ ಇಷ್ಟವಾಗಲಿಲ್ಲ. ಆಕಸ್ಮಾತಾಗಿ ಕತೆ ಕೇಳಿದ ದೊರೆ-ಭಗವಾನ್ ಚಿತ್ರಕಥೆ ಹೆಣೆ, ರಾಜ್ ಅವರಿಗಾಗಿ ಕೆಲವು ಮಾರ್ಪಾಡು ಮಾಡಿದ್ದರಂತೆ. ಚಿಟ್ಟಿಬಾಬು ಮತ್ತು ಎನ್.ಜಿ.ರಾವ್ ಕ್ಯಾಮರಾ ಕೈಚಳಕ, ಚಿ.ಉದಯಶಂಕರ್ ಸಂಭಾಷಣೆ ಎಲ್ಲವೂ ಅದ್ಭುತವಾಗಿ ಕಸ್ತೂರಿ ನಿವಾಸದಲ್ಲಿ ಮೂಡಿ ಬಂದಿತ್ತು.

ಆದರ್ಶ ನಾಯಕ, ಪುಟಾಣಿ ಬೇಬಿ, ಪಾರಿವಾಳ, ಆರತಿ ನಟನೆ ಎಲ್ಲವೂ ಸಿನಿಮಂದಿಯನ್ನು ಮಂತ್ರ ಮುಗ್ದರನ್ನಾಗಿಸಿತ್ತು. ಅಂದು ಈ ಸಿನಿಮಾ ತಿರಸ್ಕರಿಸಿದ ಶಿವಾಜಿ ಗಣೇಶ್ ಇಷ್ಟಪಟ್ಟು ಸಿನಿಮಾ ಮಾಡಿದ್ರು. ಹಿಂದಿ ಭಾಷೆಗೂ ಈ ಸಿನಿಮಾ ರಿಮೇಕ್ ಆಯ್ತು.
ಅಪ್ಪನ ಆಸೆ ಈಡೇರಿಸಲು ಗೌಡರ ಪುತ್ರರು 2014ರ ನವೆಂಬರ್ 7ರಂದು ಕಸ್ತೂರಿ ನಿವಾಸ ಸಿನಿಮಾವನ್ನು ಬಣ್ಣದ ಲೇಪನದೊಂದಿಗೆ ತೆರೆಗೆ ತಂದರು. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ 50ರ ಸಂಭ್ರಮ.