Wednesday, August 20, 2025

Latest Posts

ಓಮ್ನಿ ಕಾರಲ್ಲಿ ಕಿಡ್ನ್ಯಾಪ್‌ ಪ್ಲ್ಯಾನ್ : ಹಾಸನದಲ್ಲಿ ಆತಂಕ !

- Advertisement -

ಹಾಸನದ ಆಲೂರು ತಾಲೂಕಿನ ಹಂಚೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಓರ್ವ ವಿದ್ಯಾರ್ಥಿನಿಯನ್ನು ಅಪಹಿರಿಸಲು ಯತ್ನಿಸಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿ ಬೆಳಗ್ಗೆ ಹಾಂಜಿಹಳ್ಳಿಯಲ್ಲಿನ ತನ್ನ ಮನೆಯಿಂದ 2 ಕಿಮೀ ದೂರದಲ್ಲಿರುವ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದ ಮಾರುತಿ ಓಮಿನಿ ಕಾರೊಂದು ರಸ್ತೆ ಮಧ್ಯೆಯೇ ನಿಂತಿದೆ.

ಆಗ, ವಿದ್ಯಾರ್ಥಿನಿ ಕಾರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಕಂಡಿದ್ದಾಳೆ. ಇದೇ ವೇಳೆ, ಓರ್ವ ಯುವಕ ವಿದ್ಯಾರ್ಥಿನಿಯನ್ನು ಹಿಡಿಯಲು ಓಡಿ ಬಂದಿದ್ದನಂತೆ. ಆಗ, ವಿದ್ಯಾರ್ಥಿನಿ ಶಾಲೆಯ ಬ್ಯಾಗ್ ಅನ್ನು ಬಿಸಾಡಿ, ಕಿರುಚಿಕೊಂಡು ಓಡಿ ಹೋಗಿ ಅಲ್ಲೇ ಇದ್ದ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾಳೆ. ಬಳಿಕ, ಆಶ್ರಯ ನೀಡಿದ ಮನೆಯವರು ವಿದ್ಯಾರ್ಥಿನಿಯನ್ನು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ.

ಶಾಲೆಯ ಸಿಬ್ಬಂದಿ ವಿದ್ಯಾರ್ಥಿನಿಯ ಪೋಷಕರಿಗೆ ವಿಚಾರ ತಿಳಿಸಿದ್ದಾರೆ. ಆಲೂರು ಪೊಲೀಸರಿಗೂ ವಿಚಾರ ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪೊಲೀಸರು ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಮ್ಮ ಗ್ರಾಮಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಸರಿಯಾಗಿಲ್ಲ. ಶಾಲೆಗೆ ಹೋಗುವಾಗ ಮತ್ತು ಬರುವ ಸಮಯದಲ್ಲಿ ಮಕ್ಕಳಿಗೆ ಬಸ್‌ಗಳು ಮಿಸ್ ಆಗುತ್ತಿವೆ. ಕೆಲ ಚಾಲಕ ಹಾಗೂ ನಿರ್ವಾಹಕರು ಬಸ್ ಹತ್ತಿಸಿಕೊಳ್ಳುವುದಿಲ್ಲ. ಹೀಗಾಗಿ ಮಕ್ಕಳು ನಡೆದುಕೊಂಡು ಹೋಗುತ್ತಾರೆ. ಒಂದು ವೇಳೆ ನಮ್ಮ ಮಗಳು ಅಪಹರಣಕ್ಕೆ ಒಳಗಾಗಿದ್ದರೆ ಏನು ಗತಿ? ಈ ಘಟನೆ ಹಿಂದೆ ಯಾರಿದ್ದಾರೆ ಪತ್ತೆ ಹಚ್ಚಬೇಕು. ಕೂಡಲೇ ಆರೋಪಿಗಳನ್ನು ಬಂಧಿಸಿ ಎಂದು ವಿದ್ಯಾರ್ಥಿನಿಯ ಪೋಷಕರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿರುವ ವಿಚಾರ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ದೌಡಾಯಿಸಿದ್ದಾರೆ. ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿ ನೀಡಿದ ಮಾಹಿತಿ ಆಧರಿಸಿ ಅಧಿಕಾರಿಗಳು ತಾಲ್ಲೂಕಿನ ಬೇರೆ ಯಾವುದಾದರು ಶಾಲೆಯಿಂದ ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರಾ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss