ಶಿವಮೊಗ್ಗ: ಭ್ರಷ್ಟಾಚಾರ ಆರೋಪ ಹೊತ್ತಿರುವಂತ ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾಗೊಳಿಸಲಾಗಿದೆ. ನೂತನ ಅಧ್ಯಕ್ಷರನ್ನಾಗಿ ಹೆಚ್ ಆರ್ ಬಸವರಾಜಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಇಂದು ಶಿವಮೊಗ್ಗದಲ್ಲಿ ಈ ಸಂಬಂಧ ರಾಜ್ಯ ರೈತ ಸಂಘದ ಮುಖಂಡರ ಸಭೆಯನ್ನು ನಡೆಸಲಾಯಿತು. ಈ ರೈತಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ವಜಾಗೊಳಿಸಿ, ನೂತನ ಅಧ್ಯಕ್ಷರನ್ನಾಗಿ ಹೆಚ್ ಆರ್ ಬಸವರಾಜಪ್ಪ ಅವರನ್ನು ನೇಮಕ ಮಾಡಲಾಗಿದೆ.
ಅಂದಹಾಗೇ, ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ವಜಾಗೊಳಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿದ್ದ ಸಂದರ್ಭದಲ್ಲಿ ಮುಷ್ಕರ ಹಿಂಪಡೆಯಲು 35 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಅವರ ಮೇಲಿದೆ. ಈ ಹಿನ್ನಲೆಯಲ್ಲಿ ಇದೀಗ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ವಜಾಗೊಳಿಸಲು ರೈತ ಸಂಘದ ಸಭೆ ತೀರ್ಮಾನಿಸಿದೆ. 20 ಜಿಲ್ಲೆಗಳ ಅಧ್ಯಕ್ಷರು ಬಸವರಾಜಪ್ಪ ಅವರನ್ನು ಬೆಂಬಲಿಸಿದ್ದಾರೆ.




