ಬೆಂಗಳೂರು : ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳಿಗೆ, ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಹಲವು ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿದೆ. ಹೀಗಾಗಿ, ಬೆಂಗಳೂರು, ಬಳ್ಳಾರಿ, ಮೈಸೂರು, ಕೊಪ್ಪಳ, ಬೀದರ್, ಹುಬ್ಬಳ್ಳಿ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಲಕ್ಷಾಂತರ ರೂ. ಮೌಲ್ಯದ ಅಕ್ರಮ ಆಸ್ತಿ, ಕೆಜಿಗಟ್ಟಲೇ ಚಿನ್ನಾಭರಣ, ಚಿನ್ನದ ಬಿಸ್ಕೇಟ್ಸ್, ಬೆಳ್ಳಿ ವಸ್ತುಗಳು, ಕಂತೆ ಕಂತೆ ಹಣ ಪತ್ತೆಯಾಗಿವೆ.
ಐಎಎಸ್ ಅಧಿಕಾರಿ ವಾಸಂತಿ ಅಮರ್, ಟೌನ್ ಪ್ಲ್ಯಾನಿಂಗ್ ಸಹಾಯಕ ನಿರ್ದೇಶಕ ಮಾರುತಿ ಬಗಲಿ ಮಾರುತಿ, ಬಿಬಿಎಂಪಿ ಕಾರ್ಯ ನಿರ್ವಾಹಕ ಎರ್ರಪ್ಪ ರೆಡ್ಡಿ ಮನೆ ಮೇಲೆ ದಾಳಿ ಮಾಡಲಾಗಿದೆ. ಈ ಹಿಂದೆಯೂ ಈ ಮೂವರು ಅಧಿಕಾರಿಗಳ ವಿರುದ್ಧ ಅಕ್ರಮ ಆರೋಪ ಕೇಳಿಬಂದಿತ್ತು. ಅಕ್ರಮವಾಗಿ ಸರ್ಕಾರಿ ಜಮೀನನ್ನು, ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತಂತೆ. ಇಂದು ಎಸ್ಪಿ ವಂಶಿಕೃಷ್ಣ ನೇತೃತ್ವದ ತಂಡ ದಾಳಿ ಮಾಡಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮರು ಜಾತಿಗಣತಿ : ಸಿದ್ದು ಮಹತ್ವದ ನಿರ್ಧಾರ
ಕೊಪ್ಪಳ ಜಿಲ್ಲಾ ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಟ್ಯಾಕ್ಸ್ ಉಪ ನಿರ್ದೇಶಕ ಎಸ್.ಎಂ. ಚೌವ್ಹಾಣ್. ಹುಬ್ಬಳ್ಳಿಯ ವಿದ್ಯಾನಗರದ ನಿವಾಸದಲ್ಲಿ ಶೋಧ ನಡೆಸಲಾಗಿದೆ. ಕೈ ಇಟ್ಟಲೆಲ್ಲಾ ಕಂತೆ ಕಂತೆ ನೋಟುಗಳೇ ಸಿಕ್ಕಿವೆ. ಈ ವೇಳೆ 4 ಲಕ್ಷ ಹಣ, ಚಿನ್ನಾಭರಣ, ಒಟ್ಟು 12 ಸೈಟ್ಗಳ ದಾಖಲೆ ಪತ್ತೆಯಾಗಿದೆ. ಮನೆಯ ಮೂಲೆ ಮೂಲೆಯಲ್ಲೂ ತಪಾಸಣೆ ನಡೆಸಲಾಗಿದೆ. ಪ್ರತಿಯೊಂದು ದಾಖಲೆಗಳನ್ನು ಪಡೆದು, ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದಾರೆ.
ಮೈಸೂರು ಪಾಲಿಕೆ ಉಪವಿಭಾಗಾಧಿಕಾರಿ ವೆಂಕಟರಾಮ್, ಕೌಶಲ್ಯಾಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ಸ್ವಾಮಿ ಕಚೇರಿ, ಮನೆಗಳ ಮೇಲೆ ದಾಳಿ ಮಾಡಲಾಗಿದೆ.