ಕೇಂದ್ರ ಚುನಾವಣಾ ಆಯೋಗವು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ಬಳಿಕ, ಒಟ್ಟು 3.67 ಕೋಟಿ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಟ್ಟಿದೆ. ಎರಡನೇ ಹಂತದ SIR ಪ್ರಕ್ರಿಯೆ ನಡೆಸಿದ ಮಧ್ಯಪ್ರದೇಶ, ಛತ್ತೀಸಗಢ, ಕೇರಳ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳ ಕರಡು ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ.
ಇನ್ನು ಪಶ್ಚಿಮ ಬಂಗಾಳ, ರಾಜಸ್ಥಾನ, ಗೋವಾ, ಪುದುಚೇರಿ, ಲಕ್ಷದ್ವೀಪ, ಗುಜರಾತ್ ಮತ್ತು ತಮಿಳುನಾಡಿನ ಕರಡು ಪಟ್ಟಿಗಳನ್ನು ಆಯೋಗವು ಕಳೆದ ಹತ್ತು ದಿನಗಳಲ್ಲಿ ಪ್ರಕಟಿಸಿದೆ. ಇದರೊಂದಿಗೆ, ಉತ್ತರ ಪ್ರದೇಶವನ್ನು ಹೊರತುಪಡಿಸಿ, ಎರಡನೇ ಹಂತದಲ್ಲಿ SIR ಪ್ರಕ್ರಿಯೆ ಕೈಗೊಂಡ ಎಂಟು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಗಳು ಪ್ರಕಟವಾದಂತಾಗಿದೆ.
ಉತ್ತರ ಪ್ರದೇಶದ ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 31ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದ ಅರ್ಹ ಮತದಾರರು, ನಿಗದಿತ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ. ಕರಡು ಪಟ್ಟಿಗೆ ಸಂಬಂಧಿಸಿದ ಹಕ್ಕು ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಜನವರಿ 22ರವರೆಗೆ ಗಡುವು ನೀಡಲಾಗಿದೆ.
ಮೊದಲ ಹಂತದ ಎಸ್ಐಆರ್ ಈ ವರ್ಷದ ಆರಂಭದಲ್ಲಿ ಬಿಹಾರದಲ್ಲಿ ನಡೆದಿತ್ತು. ಅಲ್ಲಿ 7.89 ಕೋಟಿ ಮತದಾರರ ಪೈಕಿ ಸುಮಾರು 65 ಲಕ್ಷ ಮತದಾರರನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿತ್ತು. ಆ ಬಳಿಕ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ ಸುಮಾರು ಮೂರು ಲಕ್ಷ ಮತದಾರರನ್ನು ಮತ್ತೆ ಪಟ್ಟಿಗೆ ಸೇರಿಸಲಾಗಿದೆ.
ಎರಡನೇ ಹಂತದ ಎಸ್ಐಆರ್ ನಡೆದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಹಿಂದಿನ ಪಟ್ಟಿಯಲ್ಲಿ 35.52 ಕೋಟಿ ಮತದಾರರು ಇದ್ದರು. ಅದರಲ್ಲಿ 31.85 ಕೋಟಿ ಮತದಾರರು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆಯೋಗವು ಕೈಬಿಟ್ಟಿರುವ 3.67 ಕೋಟಿ ಮತದಾರರಲ್ಲಿ 99.81 ಲಕ್ಷ ಮಂದಿ ‘ಮೃತಪಟ್ಟವರು’ ಎಂದು ಹೇಳಿದೆ. 2.47 ಕೋಟಿ ಮತದಾರರು ಶಾಶ್ವತವಾಗಿ ಬೇರೆ ಕಡೆಗೆ ವಲಸೆ ಹೋಗಿದ್ದಾರೆ. ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿಸಿದ್ದಾರೆ ಎಂಬ ಕಾರಣಕ್ಕೆ 18.60 ಲಕ್ಷ ಮತದಾರರನ್ನು ಕೈಬಿಡಲಾಗಿದೆ.
ವರದಿ : ಲಾವಣ್ಯ ಅನಿಗೋಳ




