State News:
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (ಲ.)ಜಿಲ್ಲಾ ಸಂಚಾಲನಾ ಸಮಿತಿ, ಮಂಡ್ಯ ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಸರ್ಕಾರಿ ನೌಕರರ ವಿವಿಧ ಇಲಾಖಾ ಹಾಗೂ ವೃಂದ ಸಂಘಟನೆಗಳುರಾಜ್ಯಮಟ್ಟದ ಧರಣಿ ಕಾರ್ಯಕ್ರಮವನ್ನು ದಿನಾಂಕ : 29-09-2022ರ ಗುರುವಾರ ಸಮಯ : ಬೆಳಿಗ್ಗೆ 10-30 ರಿಂದ ಸಂಜೆ 5-00 ಗಂಟೆ ವರೆಗೆ ಹಮ್ಮಿಕೊಳ್ಳಲಾಗಿತ್ತು.ಮಂಡ್ಯದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಪ್ರಮುಖ ಬೇಡಿಕೆಗಳನ್ನಿಟ್ಟು ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರಿ / ಹೈಕೋರ್ಟ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಸೌಲಭ್ಯಗಳ ಪರಿಷ್ಕರಣೆ ಮಾಡಲು 7ನೇ ವೇತನ ಆಯೋಗ ರಚಿಸುವುದು. ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ನೌಕರರ ಮತ್ತು ಪಿಂಚಣಿದಾರರ 18 ತಿಂಗಳ ಬಾಕಿ ತುಟ್ಟಿಭತ್ಯೆಯನ್ನು ತಕ್ಷಣವೇ ಬಿಡುಗಡೆ ಮಾಡುವುದು. 2022ರ ಜುಲೈನಿಂದ ಜಾರಿಗೆ ಬರುವಂತೆ ಶೇ. 25ರಷ್ಟು ಮಧ್ಯಂತರ ಪರಿಹಾರವನ್ನು ಕೂಡಲೇ ಘೋಷಿಸುವುದು. ನೂತನ ಪಿಂಚಣಿ ಯೋಜನೆಯನ್ನು (NPS) ರದ್ದುಪಡಿಸಿ, ನಿಶ್ಚಿತ ಪಿಂಚಣಿ ಪದ್ಧತಿ ಮರುಸ್ಥಾಪಿಸುವುದು. ಆಡಳಿತ ಸುಧಾರಣಾ ಆಯೋಗ-2ರ ನೌಕರ-ವಿರೋಧಿ ಶಿಫಾರಸ್ಸುಗಳನ್ನು ಕೈಬಿಡುವುದು ಹಾಗೂ ಖಾಲಿಯಿರುವ 2.80 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದು, ಕೇಂದ್ರ ಮಾದರಿಯ ವೇತನ ಕೊಡಿಸುವ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭರವಸೆಯು ಕಳೆದ 2 ವರ್ಷಗಳಿಂದಲೂ ರಾಜ್ಯದಾದ್ಯಂತ ಕೇವಲ ಪ್ರಚಾರಕ್ಕೆ ಸೀಮಿತವಾದ್ದರಿಂದ ನೌಕರರು ಭ್ರಮನಿರಸನಗೊಂಡಿರುತ್ತಾರೆ.
2022-23ರ ಆಯವ್ಯಯ ಮಂಡನೆ ಸಂದರ್ಭದಲ್ಲಿಯೂ ಮಾನ್ಯ ಮುಖ್ಯಮಂತ್ರಿಗಳು ಕೇಂದ್ರ ಮಾದರಿಯಲ್ಲಿ ವೇತನ ಆಯೋಗವನ್ನು ಘೋಷಿಸುತ್ತಾರೆಂದು ಮತ್ತು ಆಯವ್ಯಯದಲ್ಲಿ ವೇತನ ಆಯೋಗವು ಘೋಷಣೆಯಾಗಿಯೇ ಹೋಯಿತೆಂದು ಮಾಧ್ಯಮಗಳಲ್ಲಿ ಬೃಹತ್ ಜಾಹೀರಾತು ಹರಿದಾಡಿರುತ್ತವೆ. ಹೀಗೆ ಸರ್ಕಾರಿ ನೌಕರರ ಹಣವು ಸುಳ್ಳು ಪ್ರಚಾರ ಹಾಗೂ ಜಾಹೀರಾತುಗಳಿಗೆ ಬಳಕೆಯಾಗಿ ಸರ್ಕಾರಿ ನೌಕರರನ್ನು ದಾರಿ ತಪ್ಪಿಸುವ ಕೆಲಸ ನಿರಂತರವಾಗಿ ಸಾಗಿರುತ್ತದೆ. ವಾಸ್ತವವೇನೆಂದರೆ, 2022-23ರ ಆಯವ್ಯಯ ಮಂಡನೆ ಸಂದರ್ಭದಲ್ಲಿಯಾಗಲೀ ಅಥವಾ ಇತ್ತೀಚಿನ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೆಗಳಿಗೆ ನೀಡಿರುವ ಉತ್ತರದಲ್ಲಿಯಾಗಲಿ ಸರ್ಕಾರವು ವೇತನ ಆಯೋಗ ರಚನೆ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ನೀಡಿರುವುದಿಲ್ಲ. ಆದರೆ ಆಡಳಿತ ಸುಧಾರಣೆ ನೆಪದಲ್ಲಿ ಖಾಲಿ ಹುದ್ದೆಗಳನ್ನುರದ್ದುಮಾಡುವ ಘೋಷಣೆಯನ್ನು ಆಯವ್ಯಯದ ಮೂಲಕ ನೌಕರರಿಗೆ ಕೊಡುಗೆಯಾಗಿ ನೀಡಲಾಗಿದೆ.ಇಂತಹ ಬೇಡಿಕೆಯನ್ನಿಟ್ಟು ಧರಣಿ ಕಾರ್ಯಕ್ರಮ ಕೈಗೊಳ್ಳಲಾಯಿತು.