ನಿನ್ನೆ ತೆಲಂಗಾಣದ ಊರೊಂದರ ಬೀದಿ ಬದಿಯಲ್ಲಿರುವ ಕಾಳಿ ಮಾತೆಯ ಮೂರ್ತಿಯ ಬಳಿ, ಓರ್ವ ವ್ಯಕ್ತಿಯ ರುಂಡ ಪತ್ತೆಯಾಗಿದೆ. ಈ ಭೀಕರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದು ಯಾರ ತಲೆ ಬುರುಡೆಯಾಗಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕೃತ್ಯವನ್ನು ಎಸಗಿದವರು ಯಾರು ಎಂದು ಕಂಡು ಹಿಡಿಯಲು ಪೊಲೀಸರು ಎರಡು ತಂಡವನ್ನು ರಚಿಸಿದ್ದಾರೆ.
ನಲ್ಗೊಂಡಾ ಜಿಲ್ಲೆಯ ಊರಲ್ಲಿ ಈ ಕೃತ್ಯ ನಡೆದಿದ್ದು, ನರಬಲಿ ಕೊಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಯಾಗಿರುವ ದೇವರರಕೊಂಡಾ ಆನಂದ್ ರೆಡ್ಡಿ, ಈ ಬಗ್ಗೆ ಮಾತನಾಡಿದ್ದು, 30 ವರ್ಷ ಆಸುಪಾಸಿನ ವ್ಯಕ್ತಿಯ ತಲೆಬುರುಡೆ ಇದಾಗಿದೆ. ಈತನನ್ನು ಯಾರೋ ಕೊಲೆ ಮಾಡಿ, ಈತನ ತಲೆಬುರುಡೆ ದೇವಿಯ ಪಾದದ ಕೆಳಗಿರಿಸಿದ್ದಾರೆ. ನಾವು ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದು, ಕೆಲ ದಿನಗಳಲ್ಲೇ ಆರೋಪಿಗಳನ್ನ ಪತ್ತೆ ಹಚ್ಚುತ್ತೇವೆ ಎಂದು ಹೇಳಿದ್ದಾರೆ.
ಅಲ್ಲದೇ, ಸುತ್ತಮುತ್ತಲಿರುವ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಚೆಕ್ ಮಾಡಲಾಗುತ್ತಿದ್ದು, ಆ ವ್ಯಕ್ತಿಯ ದೇಹ ಹುಡುಕಲು ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ. ಇದರ ಮಧ್ಯೆ ಸ್ಥಳೀಯ ಕುಟುಂಬದವರು ಬಂದು ಎರಡು ವರ್ಷದ ಮೊದಲು ನಮ್ಮ ಮನೆಯ ಮಾನಸಿಕ ಅಸ್ವಸ್ಥ ವ್ಯಕ್ತಿ ಮನೆ ಬಿಟ್ಟು ಹೋಗಿದ್ದ, ಈ ಮುಖ ನೋಡಲು ಅವನ ಹಾಗೆ ಇದೆ ಎಂದು ಹೇಳಿದ್ದಾರೆ.
ಇನ್ನು ಈ ದೇವಿಗೆ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದ ಅರ್ಚಕರು ಬೆಳಿಗ್ಗೆ ಪೂಜೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ಆಗ ಅರ್ಚಕರು ಪೊಲೀಸರಿಗೆ ಈ ವಿಷಯ ತಿಳಿಸಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.