ವಿಜಯನಗರ: ಸಚಿವ ಆನಂದ್ ಸಿಂಗ್ ಅವರು ಬೆಂಕಿ ಹಚ್ಚೋದಾಗಿ ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಒತ್ತಾಯಿಸಿ, ಒಂದೇ ಕುಟುಂಬದ ಸದಸ್ಯರು ಸಾಮೂಹಿಕ ಆತ್ಮಹತ್ಯೆಗೆ ವಿಜಯನಗರದ ಎಸ್ಪಿ ಕಚೇರಿ ಮುಂದೆ ಯತ್ನಿಸಿದ ಘಟನೆ ನಡೆದಿದೆ.
ಇಂದು ಹೊಸಪೇಟೆಯಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿದಂತ 6ನೇ ವಾರ್ಡ್ ನಿವಾಸಿ ಡಿ.ಪೋಲಪ್ಪ ಹಾಗೂ ಅವರ ಕುಟುಂಬದವರು, ನಮ್ಮ ಜಾಗ ಖಾಲಿ ಮಾಡಿ ಎಂಬುದಾಗಿ ಸಚಿವ ಆನಂದ್ ಸಿಂಗ್ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಆರೋಪಿಸಿದರು. ಅಲ್ಲದೇ ಎಸ್ಪಿ ಕಚೇರಿಯ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದರು.
ಆತ್ಮಹತ್ಯೆಗೆ ಯತ್ನಿಸಿದಂತ ಕುಟುಂಬಸ್ಥರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಂದಹಾಗೇ ಮಡಿವಾಳ ಸಮಾಜಕ್ಕೆ ಸೇರಿದ ಭೂಮಿ ಒತ್ತುವರಿಯನ್ನು ಡಿ.ಪೋಲಪ್ಪ ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಈ ಜಾಗವನ್ನು ತೆರವು ಮಾಡೋದಕ್ಕೆ ಸೂಚಿಸಿದ್ದರಿಂದ ಸಚಿವರ ಮೇಲೆ ಆರೋಪಿಸಿ ಸಾಮೂಹಿಕ ಆತ್ಮಹತ್ಯೆಗೆ ಕುಟುಂಬಸ್ಥರು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.




