ಡಿಸಿಎಂ ಡಿಕೆ ಶಿವಕುಮಾರ್ ಅವ್ರು ಆರ್ಎಸ್ಎಸ್ ಗೀತೆ ಹಾಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಬೇರೆಯದ್ದೇ ಚರ್ಚೆ ಹುಟ್ಟು ಹಾಕಿದೆ. ಇದಕ್ಕೆ ಪುಷ್ಠಿ ನೀಡುವಂತೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚಾಮುಂಡಿ ಬೆಟ್ಟ ಸರ್ಕಾರದ ಆಸ್ತಿ ಅನ್ನೋ ಮಾತಿಗೂ ಟಾಂಗ್ ಕೊಟ್ಟಿದ್ದು, ಸಾಲು ಸಾಲು ಪ್ರಶ್ನೆಗಳು, ಸವಾಲುಗಳನ್ನು ಹಾಕಿದ್ದಾರೆ.
ಡಿಕೆಶಿ ಒಂದು ಕಾಲನ್ನು ಬಿಜೆಪಿ ಕಡೆಗೂ ಇಟ್ಟಿದ್ದಾರೆ. ಬಿಜೆಪಿ ಜೊತೆ ಚರ್ಚೆಯನ್ನೂ ಮಾಡಿದ್ದಾರೆ. ದಿಲ್ಲಿಯಲ್ಲೂ ನಮ್ಮ ಮಹಾಮಹಿಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಚರ್ಚೆಯೂ ಆಗಿದೆ. 60 ರಿಂದ 70 ಕಾಂಗ್ರೆಸ್ ಎಂಎಲ್ಎ ತರ್ತೀವಿ. ಮುಂದೆಯೂ ಸದಾ ವತ್ಸಲೇ ಹಾಡುತ್ತೇವೆಂದು ಹೇಳಿದ್ದಾರೆ. ಹೀಗಂತ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ಡಿಕೆಶಿ ಪಾಪ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಅನ್ನೋದನ್ನು ಬಿಟ್ಟು, ನಮಸ್ತೆ ಸೋನಿಯಾ ಮಾತೆ, ಇಟಲಿ ಪುತ್ರಿ ಅಂತಾ ಅನ್ನಬೇಕಿತ್ತಾ? ಹೀಗಂದಿದ್ರೆ ಡಿಕೆಶಿಯನ್ನು ಮುಖ್ಯಮಂತ್ರಿ ಮಾಡ್ತಿದ್ರು. ಭಾರತ ಮಾತೆಗೆ ನಮಸ್ತೆ ಅಂದ್ರೆ ನೋವು ಆಗುತ್ತೆ. ಇಂಗ್ಲಿಷ್ನಲ್ಲಿ ಸೋನಿಯಾ ಗಾಂಧಿಗೆ ಹಾಡು ಕಟ್ಟಿ ಹಾಡಿದ್ರೆ, ಸಿದ್ದರಾಮಯ್ಯ 24 ಗಂಟೆಯಲ್ಲಿ ಇಳಿತಿದ್ರು. ಡಿ.ಕೆ ಶಿವಕುಮಾರ್ ಸಿಎಂ ಆಗ್ತಿದ್ರು. ಡಿ.ಕೆ ಶಿವಕುಮಾರ್ ನಾಟಕ ಮಾಡುತ್ತಿದ್ದಾರೆ ಅಂತಾ ವ್ಯಂಗ್ಯವಾಡಿದ್ದಾರೆ.
ಚಾಮುಂಡಿ ಬೆಟ್ಟ ಹಿಂದೂಗಳ ಸ್ವತ್ತು. ಚಾಮುಂಡಿ ದೇವಿಯ ಆರಾಧನೆಯನ್ನು ಹಿಂದೂಗಳು ಮಾಡ್ತಾರೆ. ಆದ್ರೆ, ಇದು ಸಾರ್ವಜನಿಕರ ಆಸ್ತಿ ಅಂತಾ, ಡಿಕೆ ಶಿವಕುಮಾರ್ ಹೇಳ್ತಾರೆ. ಹಾಗಾದ್ರೆ ಈ ದೇಶದಲ್ಲಿರುವ ವಕ್ಫ್ ಆಸ್ತಿಗಳು ಕೂಡ ಸರ್ಕಾರದ್ದು. ಔವರಗಜೇಬನದ್ದಾ?. ಟಿಪ್ಪು ಸುಲ್ತಾನನದ್ದೋ?. ಹಿಂದೂ ದೇವಸ್ಥಾನಗಳನ್ನು ಸಾರ್ವಜನಿಕ, ಸರ್ಕಾರದ್ದು ಅಂತಾ ಹೇಳ್ತೀರಿ. ದರ್ಗಾ, ಮಸೀದಿಗಳು ಸರ್ಕಾರದ್ದೆಂದು ಹೇಳುವ ಧಮ್, ತಾಕತ್ ಡಿಕೆ ಶಿವಕುಮಾರ್ಗೆ ಇದೆಯಾ ಅಂತಾ ಯತ್ನಾಳ್ ಸವಾಲು ಹಾಕಿದ್ರು.
ಹಿಂದೂ ಧಾರ್ಮಿಕ ಕ್ಷೇತ್ರಗಳು ಹಿಂದೂಗಳ ಸ್ವತ್ತು. ಮುಸಲ್ಮಾನರ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಮೂರ್ತಿ ಪೂಜೆ ಮಾಡುವವರನ್ನು ಕೊಲ್ಲಿ ಅಂತಾ ಅವರ ಧರ್ಮ ಹೇಳುತ್ತೆ. ನಮ್ಮ ಧರ್ಮ ಆ ರೀತಿ ಹೇಳಲ್ಲ. ನಮ್ಮದು ವಸುದೈವ ಕುಟುಂಬಕಂ ಅಂತಾ ಹೇಳುತ್ತೆ.
ಎಲ್ಲರೂ ಅಣ್ಣತಮ್ಮಂದಿರು ಅಂತಾ ಕಲಿಸೋದೆ ಸನಾತನ ಧರ್ಮ. ಅವರ ಧರ್ಮ ಇದನ್ನೆಲ್ಲಾ ಕಲಿಸಲ್ಲ. ಕಾಶ್ಮೀರವೇ ನಮ್ಮದು ಅಂತಾ ಹೇಳ್ತಾರೆ. ಅವರ ಕಡೆಯವರಿಂದ ಹೇಗೆ ಪೂಜೆ ಮಾಡಿಸ್ತೀರಾ. ಹೀಗಂತ ಸರ್ಕಾರಕ್ಕೆ ಯತ್ನಾಳ್ ಸವಾಲು ಹಾಕಿದ್ದಾರೆ.
ಇದು ಚಾಮುಂಡಿ ದೇವಿಯ ಪೂಜೆ-ಪುಷ್ಪಾರ್ಚನೆ ಎಲ್ಲಾ, ಸನಾತನ ಧರ್ಮದ ಪದ್ಧತಿ. ಯಾರು ಸನಾತನ ಧರ್ಮದಲ್ಲಿ ವಿಶ್ವಾಸವಿಡ್ತಾರೋ, ಗೌರವವಿಡ್ತಾರೋ ಅಂಥವರ ಕಡೆಯಿಂದ ಪೂಜೆ ಮಾಡಿಸಲಿ. ಸಾಕಷ್ಟು ಮಂದಿ ದಲಿತ ಮಹಿಳೆಯರು ಇದ್ದಾರೆ. ಸಾಕಷ್ಟು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ರಾಜ್ಯದಲ್ಲಿ ಇದ್ದಾರೆ. ಯಾರೂ ಕನ್ನಡ ಧ್ವಜವನ್ನು ವಿರೋಧ ಮಾಡಿದ್ರೋ?, ಕನ್ನಡದ ಬಾವುಟದಲ್ಲಿ ಹಳದಿ ಮತ್ತು ಕೆಂಪು ಇದ್ದಿದ್ದನ್ನ ಅರಿಶಿನ ಕುಂಕುಮ ಎಂದೇಳಿ ವಿರೋಧ ಮಾಡಿದ್ರೋ?, ಕನ್ನಡದ ದೇವಿ ಭುವನೇಶ್ವರಿ ಮೂರ್ತಿಯನ್ನು ವಿರೋಧ ಮಾಡಿದ್ದವರಿಗೆ ಏನು ನೈತಿಕತೆ ಇದೆ ಅಂತಾ ಯತ್ನಾಳ್ ಪ್ರಶ್ನಿಸಿದ್ರು.
ಸಿದ್ದರಾಮಯ್ಯನವ್ರದ್ದು ಅತೀ ಆಯ್ತು. ಎಲ್ಲಾ ಕಡೆಯೂ ತುಷ್ಟೀಕರಣ. ಪೊಲೀಸ್ ಇಲಾಖೆಯಲ್ಲೂ ತುಷ್ಟೀಕರಣ. ದೇವರಲ್ಲಿ ತುಷ್ಟೀಕರಣ. ಬರೀ ಮುಸಲ್ಮಾನರೇ ವೋಟ್ ಹಾಕಿದ್ದಾರಾ? ಇವರಿಗೆ ಹಿಂದೂಗಳು ವೋಟ್ ಹಾಕಿಲ್ವಾ? ತಮ್ಮ ಜಾತಿಗೆ ಏನೂ ಮಾಡದಂತೆ ಆಗಿದ್ದಾರೆ. ಬರೀ ಮುಸಲ್ಮಾನರು ಅಂತಾರೆ. ಮುಂದಿನ ಬಾರಿ ಮುಸಲ್ಮಾನರನ್ನು ಬಿಟ್ಟು ಕಾಂಗ್ರೆಸ್ಸಿಗೆ ಯಾರೂ ವೋಟ್ ಹಾಕುವುದಿಲ್ಲ. ನಮ್ಮ ಹಿಂದೂ ಧರ್ಮಕ್ಕೆ ಅಪಮಾನ ಮಾಡ್ತೀರೋ ನಿಮಗೆ ಬುದ್ಧಿ ಕಲಿಸ್ತಾರೆ. ಹತಾಶೆಯಾಗಿ ಹಿಂದೂ ಧರ್ಮದ ಅಪಮಾನ ಮಾಡ್ತಾರೆ. ಇನ್ನು, 3 ವರ್ಷ ಏನ್ ಮಾಡ್ತಾರೋ ಮಾಡ್ಲಿ. ಈ ರಾಜ್ಯದ ಜನರು ಬುದ್ಧಿ ಕಲಿಸ್ತಾರೆ ಅಂತಾ, ಶಾಸಕ ಯತ್ನಾಳ್ ಗುಡುಗಿದ್ದಾರೆ.
ಆರ್ಸಿಬಿ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಬರೀ ಪೊಲೀಸರಿಗೆ ಬೈಯ್ಯುತ್ತಿದ್ದಾರೆ. ನಮಗೆ ಕಂಟ್ರೋಲ್ ಮಾಡೋಕೆ ಆಗಲ್ಲ. ಇಷ್ಟು ಬೇಗ ವಿಜಯೋತ್ಸವ ಬೇಡ ಅಂತಾ, ಪೊಲೀಸರು ಹೇಳಿದ್ರು. ವರದಿ ಕೊಟ್ಟರೂ ಕೂಡ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಗೃಹಸಚಿವರು ಮಾಡಿದ ತಪ್ಪಿಗೆ, ಸ್ಟೇಡಿಯಂನಲ್ಲಿ ಪ್ರಾಣ ಹೋಗುತ್ತಿದ್ದವು. ಇಲ್ಲಿ ಡಿಕೆ ಶಿವಕುಮಾರ್ ಸ್ಟೇಜ್ ಮೇಲೆ ನಿಂತು, ಟ್ರೋಫಿಗೆ ಮುತ್ತು ಕೊಡ್ತಿದ್ದಾರೆ. ಪೊಲೀಸರನ್ನು ಏಕೆ ಸಸ್ಪೆಂಡ್ ಮಾಡಿದ್ರು?. ಮೊದಲು ಈ ಮೂವರನ್ನು ಸಸ್ಪೆಂಡ್ ಮಾಡಬೇಕಿತ್ತು. ನಿಮ್ಮ ಮೇಲೆ ಎಫ್ಐಆರ್ ಆಗಬೇಕಿತ್ತು. ನಿಮ್ಮ ಸ್ವಾರ್ಥಕ್ಕಾಗಿ ಸುಮ್ಮಸುಮ್ಮನೆ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ರು. ಸಿದ್ದರಾಮಯ್ಯ ಪರ್ಸನಲ್ ಅಕೌಂಟ್ನಿಂದ ಟ್ವೀಟ್ ಮಾಡ್ತಾರೆ. ಐಪಿಎಲ್ಗೂ ನಮಗೂ ಏನು ಸಂಬಂಧ, ಅದೇನು ಕರ್ನಾಟಕ ಟೀಮಾ, ದೇಶದ ಟೀಮಾ? ಅವೆಲ್ಲಾ ಹಣಕ್ಕಾಗಿ ಮಾರಿಕೊಂಡಿರುವಂತಹ ಟೀಮ್ಗಳು? ಅಂಥವರಿಗೆ ವಿಧಾನಸೌಧದ ಮೇಲೆ ಸನ್ಮಾನ ಮಾಡಿದ್ದಾರೆ. ಹೀಗಂತ ಕಾಂಗ್ರೆಸ್ಸಿಗರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.