17 ವರ್ಷಗಳ ಬಳಿಕ ಕೃಷ್ಣನಗರಿಗೆ ಉಡುಪಿಗೆ ಪ್ರಧಾನಿ ಮೋದಿ ಅವರ ಆಗಮನವಾಗಿದೆ. 2008ರ ಮೇ 8ರಂದು ಪ್ರಧಾನಿ ಆಗುವುದಕ್ಕೂ ಮುನ್ನ ಮೊದಲ ಬಾರಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ಸೇನಾ ಹೇಲಿಕಾಪ್ಟರ್ನಲ್ಲಿ ಉಡುಪಿಗೆ ಬಂದಿಳಿದ ಮೋದಿ ಸುಮಾರು 2 ಕಿಮೀ ವರೆಗೆ ಅದ್ಧೂರಿ ರೋಡ್ ಶೋ ನಡೆಸಿದ್ದಾರೆ.
ಪ್ರಧಾನಿಗಳ ಆಗಮನಕ್ಕಾಗಿ ಬೆಳಗ್ಗಿನಿಂದಲೂ ಕಾದು ಕುಳಿತಿದ್ದ ಜನ ಪುಷ್ಪಮಳೆ ಸುರಿಸಿ ಸಂತಸ ಪಟ್ಟಿದ್ದಾರೆ. ಇತ್ತ ಪ್ರಧಾನಿಗಳೂ ಜನರತ್ತ ಹೂ ಎಸೆದು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ರೋಡ್ ಶೋ ಮುಗಿಯುತ್ತಿದ್ದಂತೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ರಥಬೀದಿ ಮೂಲಕ ಆಗಮಿಸಿದ ಮೋದಿ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದು ಪುನೀತರಾಗಿದ್ದಾರೆ. ಬಳಿಕ ಮಧ್ವ ಸರೋವರಕ್ಕೆ ತೆರಳಿ ತೀರ್ಥ ಪ್ರೋಕ್ಷಣೆ ಮಾಡಿ, ನಂತರ ಮಠದೊಳಕ್ಕೆ ತೆರಳಿದ್ದಾರೆ.
ದೇವರ ದರ್ಶನ ಪಡೆದು ಮಧ್ಯಾಹ್ನ 12.15ರ ಸುಮಾರಿಗೆ ವೇದಿಕೆ ಬಳಿಗೆ ಬಂದ ಪ್ರಧಾನಿಗಳು ʻಪುರುಷೋತ್ತಮ ಯೋಗʼ ಎನ್ನುವ ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕ ಪಠಿಸಿ, ಕೃಷ್ಣನನ್ನ ನೆನೆದರು. ಭಗವದ್ಗೀತೆ ಸಮಾವೇಶದಲ್ಲಿ ಸುಮಾರು 18 ಸಾವಿರ ಭಕ್ತರು ಪಾಲ್ಗೊಂಡಿದ್ದರು. ವೇದಿಕೆ ಸೇರಿ ಹಲವೆಡೆ ಎಸ್ಪಿಜಿ ಹಾಗೂ ಪೊಲೀಸ್ ಕಣ್ಗಾವಲು ಇದ್ದು ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ವಿಶ್ವಗೀತಾ ಪಾರಾಯಣ ವೇದಿಕೆ ಬಳಿ ಲಕ್ಷ ಕಂಠ ಭಗವದ್ಗೀತೆ ಪಠಣ ನಡೆಯಿತು, ಸಾವಿರಾರು ಭಕ್ತರು ಭಗವದೀತೆಯ ಶ್ಲೋಕ ಪಠಿಸಿದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸ್ಥಳೀಯ ಬಿಜೆಪಿ ನಾಯಕರು ದನಿಗೂಡಿಸಿದರು.
ಇನ್ನೂ ಪ್ರಧಾನಿ ಮೋದಿ ಅವರು ಪಠಿಸಿದ ಭಗವದ್ಗೀತೆಯ 15ನೇ ಅಧ್ಯಾಯ ಅತ್ಯಂತ ವಿಶೇಷ ಮತ್ತು ಮಹತ್ವವುಳ್ಳದ್ದಾಗಿದೆ. ʻನಿನ್ನ ಕರ್ಮವನ್ನ ನೀನು ಮಾಡು ಫಲಾಫಲದ ಚಿಂತೆ ಬಿಡುʼ… ಎನ್ನುವ ಮಾತನ್ನು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದ ಕಿವಿಮಾತು. ಜಗತ್ತು ಆತ್ಮ ಪರಮಾತ್ಮನ ಕುರಿತಾದ ಗೂಡತತ್ವ. ಜ್ಞಾನವನ್ನ ಗ್ರಹಿಸುವ ಮೂಲಕ ಅಂತಿಮ ಸತ್ಯ ದರ್ಶನ ಪಡೆಯಬಹುದು. 15ನೇ ಅಧ್ಯಾಯವನ್ನ ಅರ್ಥ ಮಾಡಿಕೊಂಡವನು ಪರಿಪೂರ್ಣತೆ ಕಾಣುತ್ತಾನೆʼ ಎಂಬುದು ಈ ಅಧ್ಯಾಯದ ಮಹತ್ವ.
ಅಲ್ಲದೇ ಇದು ಸಂಸಾರದ ಅಶ್ವತ್ಥ ಮರವನ್ನ ಉದಾಹರಣೆಯಾಗಿ ಬಳಸಿಕೊಂಡು ಜಗತ್ತಿನ ಸೃಷ್ಟಿ, ಅದರ ಅನಿಶ್ಚಿತತೆ ಮತ್ತು ವೈರಾಗ್ಯದ ಮೂಲಕ ಅದರಿಂದ ಮುಕ್ತಿ ಪಡೆಯುವ ಮಾರ್ಗವನ್ನ ವಿವರಿಸುತ್ತದೆ. ಈ ಅಧ್ಯಾಯವು ಈಶ್ವರನ (ದೇವರ) ಸರ್ವವ್ಯಾಪಕತೆಯನ್ನು ವಿವರಿಸುತ್ತದೆ, ಪ್ರತಿಯೊಂದು ಸೃಷ್ಟಿಯಲ್ಲೂ ಅವನ ಇರುವಿಕೆಯನ್ನ ತೋರಿಸುತ್ತದೆ. ಇದು ಆತ್ಮದ ನಿಜವಾದ ಸ್ವರೂಪ ತಿಳಿಸುತ್ತದೆ ಮತ್ತು ವ್ಯಕ್ತಿ, ಜಗತ್ತು ಮತ್ತು ದೇವರ ನಡುವಿನ ಸಂಬಂಧವನ್ನ ವಿವರಿಸುತ್ತದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

