- Advertisement -
ಚುನಾವಣಾ ಆಯೋಗದ ಮೇಲೆ ಈಗಾಗಲೇ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಮಾಡಿದ್ದಾರೆ. ಇದೀಗ ಚುನಾವಣಾ ಆಯೋಗದ ಮೇಲೆ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ 70 ರಿಂದ 100 ಸ್ಥಾನಗಳಲ್ಲಿ ಸಂಘಟಿತ ಅಕ್ರಮಗಳು ನಡೆದಿರುವ ಶಂಕೆ ಇದೆ. ನಮ್ಮ ಚುನಾವಣಾ ವ್ಯವಸ್ಥೆಯು ಈಗಾಗಲೇ ಸತ್ತಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಈಗ ಶೇ 100ರಷ್ಟು ಪುರಾವೆ ಹೊಂದಿದೆ. ಅದು ಬಹಿರಂಗಗೊಂಡರೆ ಅಣು ಬಾಂಬ್ ಬೀಳಿಸಿದಂತೆ. ಚುನಾವಣಾ ಆಯೋಗ ಅಸ್ತಿತ್ವದಲ್ಲಿಲ್ಲ ಮತ್ತು ಕಣ್ಮರೆಯಾಗಿದೆ ಎಂದು ತೋರಿಸುವಂತಹ ಸಾಕ್ಷಿ ನಮ್ಮ ಪಕ್ಷದ ಬಳಿ ಇದೆ ಎಂದು ಹೇಳಿದ್ದಾರೆ. ದೇಶದಲ್ಲಿ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತುಹೋಗಿದೆ. 10-15 ಸ್ಥಾನಗಳಲ್ಲಿ ಅಕ್ರಮ ನಡೆದಿದ್ದರೂ ಭಾರತದ ಪ್ರಧಾನಿ ಅತ್ಯಂತ ಕಡಿಮೆ ಬಹುಮತ ಹೊಂದಿರುವ ಪ್ರಧಾನಿ. ವಾಸ್ತವವಾಗಿ ಆ ಸಂಖ್ಯೆ 70-80-100ಕ್ಕೆ ಹತ್ತಿರವಾಗಿದೆ ಎನ್ನುವುದು ನಮ್ಮ ಅನುಮಾನ. ಈ ಅಕ್ರಮಗಳು ನಡೆಯದಿದ್ದರೆ ಅವರು ಪ್ರಧಾನಿಯೇ ಆಗುತ್ತಿರಲಿಲ್ಲ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹೇಗೆ ಅಕ್ರಮ ನಡೆಸಬಹುದು ಹಾಗೂ ಹೇಗೆ ನಡೆದಿದೆ ಎಂಬುದನ್ನು ನಾವು ಕೆಲವೇ ಕೆಲವು ದಿನಗಳಲ್ಲಿ ಸಾಬೀತುಪಡಿಸಲಿದ್ದೇವೆ. ಸಂವಿಧಾನ ರಕ್ಷಿಸುವ ಸಂಸ್ಥೆಯನ್ನು ಅಳಿಸಿಹಾಕಲಾಗಿದೆ ಮತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಈ ಬಗ್ಗೆ ಪುರಾವೆಗಳನ್ನು ಹುಡುಕಲು ಆರು ತಿಂಗಳ ನಿರಂತರ ಕೆಲಸ ಮಾಡಲಾಗಿದೆ. 6.5 ಲಕ್ಷ ಮತದಾರರಲ್ಲಿ 1.5 ಲಕ್ಷ ಮತದಾರರು ಭಾವಚಿತ್ರಗಳು ಮತ್ತು ಹೆಸರುಗಳನ್ನು ಹೋಲಿಸಿದ ನಂತರ ನಕಲಿ ಎಂಬುದು ಗೊತ್ತಾಗಿದೆ ಎಂದು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ವಿಧಾನಸಭಾ ಕ್ಷೇತ್ರದ ಮತ ಕಳವು ಪ್ರಕರಣ ಉಲ್ಲೇಖಿಸಿ ಅವರು ಈ ಮಾತು ಹೇಳಿದ್ದಾರೆ.
ರಫೇಲ್ ಒಪ್ಪಂದದ ಕುರಿತ ಹೋರಾಟ ಉಲ್ಲೇಖಿಸಿದ ಅವರು, ಹೋರಾಟ ಸುಲಭವಲ್ಲ ಎಂದರು. ಪ್ರಧಾನಿ ಕಚೇರಿ ಮತ್ತು ಎನ್ಎಸ್ಎ ರಫೇಲ್ ಒಪ್ಪಂದದಲ್ಲಿ ಮಧ್ಯಪ್ರವೇಶಿಸಿ, ರಫೇಲ್ ಒಪ್ಪಂದವನ್ನು ತಿರುಚಿವೆ ಎಂದು ದಾಖಲೆ ಸ್ಪಷ್ಟವಾಗಿ ಹೇಳುತ್ತದೆ. ಈ ದಾಖಲೆಯು ಪ್ರಪಂಚದ ಯಾವುದೇ ದೇಶದಲ್ಲಿ ಯಾವುದೇ ಸರ್ಕಾರವನ್ನು ಉರುಳಿಸುತ್ತಿತ್ತು. ರಫೇಲ್ ಪ್ರಕರಣದಲ್ಲಿ ಏನೂ ಆಗಲಿಲ್ಲ. ದಾಖಲೆ ಎಲ್ಲಿಗೆ ಹೋಯಿತು ಎಂದು ನಿಮಗೆ ತಿಳಿದಿದೆ. ನಾನು 30 ಪ್ರಕರಣಗಳ ವಿರುದ್ಧ ಹೋರಾಡುತ್ತಿದ್ದೇನೆ. ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಟ ಆರಂಭಿಸಿದ ಕ್ಷಣವೇ ನಿಮ್ಮ ಮೇಲೆ ದಾಳಿ ಆರಂಭವಾಗುತ್ತದೆ ಎಂದಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ
- Advertisement -