www.karnatakatv.net :ಹುಬ್ಬಳ್ಳಿ: ಮಸೀದಿಗಳಲ್ಲಿ ನಮಾಜ್ ಮಾಡುವದರಿಂದ ಸಾಕಷ್ಟು ಶಬ್ದ ಮಾಲಿನ್ಯವಾಗುತ್ತಿದೆ. ಇದು ಸುಪ್ರೀಂಕೋರ್ಟ್ ಆದೇಶ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಶಬ್ದ ಮಾಲಿನ್ಯ ನಿಲ್ಲಿಸುವಂತೆ ಈಗಾಗಲೇ ಸುಪ್ರೀಂಕೋರ್ಟ್ ನಿಂದ ಆದೇಶ ಹೊರಡಿಸಿ 21 ವರ್ಷ ಕಳೆದಿದೆ. ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗೂ ಶಬ್ದ ಮಾಲಿನ್ಯ ಆಗಬಾರದು ಎಂದು ಆದೇಶವಿದೆ. ಸುಪ್ರೀಂ ಕೋರ್ಟ್ ನ ಆದೇಶವಿದ್ದರೂ ಈವರೆಗೂ ಈ ಆದೇಶ ಜಾರಿಯಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಪೊಲೀಸರ ನಿರ್ಲಕ್ಷದಿಂದಾಗಿ ಶಬ್ದ ಮಾಲಿನ್ಯ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆ, ದೇವಾಲಯ, ಮಸೀದಿ, ಚರ್ಚ್ ಹೀಗೆ ಅನೇಕ ಪ್ರದೇಶಗಳನ್ನ ನಿಶಬ್ದ ವಲಯಗಳು ಎಂದು ಘೋಷಿಸಲಾಗಿದೆ. ಪ್ರಾರ್ಥನೆ, ಭಜನೆ ಈ ಬಗ್ಗೆ ನಮಗೆ ಯಾವುದೇ ಆಕ್ಷೇಪ ಇಲ್ಲ . ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವ ಶಬ್ದಮಾಲಿನ್ಯದ ಬಗ್ಗೆ ನಮ್ಮ ಹೋರಾಟ ಮುಂದುವರೆಯಲಿದೆ. ಸುಪ್ರೀಂಕೋರ್ಟ್ ನ ಆದೇಶವಿದ್ದರೂ ಅದನ್ನ ಉಲ್ಲಂಘಿಸಲಾಗುತ್ತಿದೆ. ದಿನಕ್ಕೆ ಐದು ಬಾರಿ ಮಸೀದಿಗಳಲ್ಲಿ ಮೈಕ್ ಬಳಕೆ ಮಾಡುವ ಮೂಲಕ ಕಿರಿಕಿರಿ ಉಂಟು ಮಾಡಲಾಗುತ್ತಿದೆ. ಶಬ್ದ ಮಾಲಿನ್ಯ ತಡೆಗಟ್ಟುವಲ್ಲಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ಜನಸಾಮಾನ್ಯರು ಈ ಕಿರಿಕಿರಿಯನ್ನ ಸಹಿಸಿಕೊಂಡು ಜೀವನ ಮಾಡುತ್ತಿದ್ದಾರೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಮೋದ ಮುತಾಲಿಕ್ ಈ ಕುರಿತು ಅಕ್ಟೋಬರ್ 7 ರಿಂದ ಶಬ್ದ ಮಾಲಿನ್ಯ ತಡೆಯುವ ಆಂದೋಲನ ನಡೆಸಲಿದ್ದೇವೆ. ಶೀಘ್ರವೇ ಈ ಶಬ್ದ ಮಾಲಿನ್ಯ ತಡೆಯದಿದ್ದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಶಬ್ದಮಾಲಿನ್ಯದ ಬಗ್ಗೆ ಅನೇಕ ಜನ ಗಣ್ಯಮಾನ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಆದೇಶ ಜಾರಿ ಮಾಡುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ ಮುಂದಿನ ದಿನಗಳಲ್ಲಿ ಮಸೀದಿ ಮುಂದೆಯೇ ನಾವು ಉಗ್ರ ಹೋರಾಟ ನಡೆಸುತ್ತೇವೆ. ಪೊಲೀಸರು ಮಾಡಬೇಕಿರುವ ಕೆಲಸವನ್ನ ನಾವು ಮಾಡಲು ಸಿದ್ಧರಿದ್ದೇವೆ. ಮುಸ್ಲಿಂ ಸಮಾಜದ ಅನೇಕರೂ ಸಹ ಶಬ್ದ ಮಾಲಿನ್ಯದ ಬಗ್ಗೆ ಆಕ್ಷೇಪ ಮಾಡಿದ್ದಾರೆ. ಸರ್ಕಾರ ಮುಸ್ಲಿಂ ಸಮಾಜದವರ ಜೊತೆ ಮಾತನಾಡಿ ನಮಾಜ್ ಮೈಕ್ ನಿಲ್ಲಿಸಬೇಕು. ಜಗತ್ತಿನ 16 ದೇಶಗಳಲ್ಲಿ ಈ ಶಬ್ದ ಮಾಲಿನ್ಯಕ್ಕೆ ತಡೆಇದೆ. ಎಲ್ಲ ದೇಶಗಳಲ್ಲಿಯೂ ಮಸೀದಿಗಳ ಮೇಲೆ ಮೈಕ್ ಬಳಸುವುದಿಲ್ಲ. ಆದ್ರೆ ರಾಜ್ಯ ಸರ್ಕಾರ ಮುಸ್ಲಿಂ ಸಮಾಜದ ಮಾನಸಿಕತೆಯನ್ನ ಪ್ರಬಲಗೊಳಿಸುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ಟಿವಿ – ಹುಬ್ಬಳ್ಳಿ