ಗ್ರಹಣವೆಂದು ಹೆರಿಗೆ ಮುಂದೂಡಿದ ತಾಯಂದಿರು!!

ಚಂದ್ರಗ್ರಹಣದ ಸಂದರ್ಭದಲ್ಲಿ ಹಲವಾರು ಗರ್ಭಿಣಿಯರು ಹೆರಿಗೆಗೆ ಒಪ್ಪದೇ ಹಿಂಜರಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ತೀವ್ರ ಹೆರಿಗೆ ನೋವು ಅನುಭವಿಸುತ್ತಿದ್ದರೂ ಕೆಲವರು ಶಸ್ತ್ರಚಿಕಿತ್ಸಾ ಕೊಠಡಿಗೆ ಹೋಗಲು ನಿರಾಕರಿಸಿದರು. ಮರುದಿನ ಗ್ರಹಣ ಮುಗಿದ ನಂತರವೇ ಹೆರಿಗೆ ನಡೆಸಬೇಕೆಂದು ಒತ್ತಾಯಿಸಿದರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವೈದ್ಯರು ನೀಡಿದ ಸಲಹೆಗಳಿಗೂ ಮಹಿಳೆಯರು ಒಪ್ಪದೇ, ಚಂದ್ರಗ್ರಹಣದ ವೇಳೆ ಹೆರಿಗೆ ಮಾಡಿದರೆ ತಾಯಿ ಮತ್ತು ಮಗುವಿಗೆ ಅಪಾಯ ಉಂಟಾಗುತ್ತದೆ ಎಂಬ ನಂಬಿಕೆಗೆ ಬಲಿಯಾದರು. ಈ ಮಧ್ಯೆ ಇಬ್ಬರು ಗರ್ಭಿಣಿಯರಲ್ಲಿ ಆಮ್ಲಜನಕದ ಮಟ್ಟ ಕುಸಿದ ಪರಿಣಾಮ ಪರಿಸ್ಥಿತಿ ಗಂಭೀರವಾಗಿತು. ತಕ್ಷಣವೇ ಆಸ್ಪತ್ರೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು, ಹಿರಿಯ ವೈದ್ಯರು ಕುಟುಂಬಸ್ಥರೊಂದಿಗೆ ಮಾತನಾಡಿ ಅಪಾಯದ ಬಗ್ಗೆ ಮನವರಿಕೆ ಮಾಡಿದರು. ನಂತರ ಮಹಿಳೆಯರು ಚಿಕಿತ್ಸೆಗಾಗಿ ಒಪ್ಪಿಕೊಂಡರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೂಢನಂಬಿಕೆಗಳಿಂದಾಗಿ ನೋವಿನಲ್ಲಿ ನರಳುತ್ತಿದ್ದರೂ ಹೆರಿಗೆ ಮುಂದೂಡುವಂತೆ ಕೆಲವು ಮಹಿಳೆಯರು ಒತ್ತಾಯಿಸಿದ್ದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಂತಹ ಅತಿಯಾದ ನಂಬಿಕೆಗಳನ್ನು ನಿರ್ಲಕ್ಷಿಸುವುದು ಅಗತ್ಯವೆಂದು ಬಳ್ಳಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಮೇಶ್ ಬಾಬು ತಿಳಿಸಿದ್ದಾರೆ. ಅದೃಷ್ಟವಶಾತ್, ವೈದ್ಯರು ತಕ್ಷಣ ಕ್ರಮ ಕೈಗೊಂಡ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ.

ಗರ್ಭಿಣಿಯರು ನೋವು ಅನುಭವಿಸುವಾಗ ಅಥವಾ ಗರ್ಭಧಾರಣೆಯ ಸಂಬಂಧಿತ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಶುಭ-ಅಶುಭ ಸಮಯಗಳನ್ನು ಪರಿಗಣಿಸದೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಇತ್ತೀಚಿನ ಚಂದ್ರಗ್ರಹಣದ ಸಂದರ್ಭದಲ್ಲೂ ನಮ್ಮ ಸಿಬ್ಬಂದಿ ಹಿಂಜರಿಯದೆ ಹಲವಾರು ಹೆರಿಗೆಗಳಿಗೆ ನೆರವಾದರು, ಎಂದು ತಿಳಿಸಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author