Dharwad News: ಧಾರವಾಡ : ಮಾಜಿ ಸಚಿವ ನಾಗೇಂದ್ರರನ್ನ ಇಡಿ ವಶಕ್ಕೆ ಪಡೆದಿರುವ ವಿಚಾರ ನನಗೂ ಈಗ ಮಾಹಿತಿ ಬಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ವಶಕ್ಕೆ ಪಡೆದಿರುವ ವಿಚಾರ ಸಂಬಂಧ ಇಂದು ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ರೂಲ್ಸ್ ಪ್ರಕಾರ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಎಸ್ಬಿಐ ಬ್ಯಾಂಕ್(SBI Bank) ನವರು ಸಿಬಿಐ(CBI)ಗೆ ದೂರು ಕೊಟ್ಟಿದ್ದಾರೆ. ಹಾಗಾಗಿ ಪ್ರಕರಣದಲ್ಲಿ ಈಗ ಇಡಿ ಕೂಡ ಪ್ರವೇಶಿಸಿದೆ. ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಈಗಾಗಲೇ ಎಸ್ಐಟಿಯಿಂದ ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದರು.
ಭ್ರಷ್ಟಾಚಾರ ಆಗಿರೋದಕ್ಕೆ ಇಡಿ ವಶಕ್ಕೆ ಪಡೆದಿರುವುದೇ ಸಾಕ್ಷಿ ಎಂದು ವಿಜಯೇಂದ್ರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಭ್ರಷ್ಟಾಚಾರ ಆಗಿದೆಯೋ ಇಲ್ಲವೋ ವರದಿ ಬಂದ ಮೇಲೆಯೇ ಗೊತ್ತಾಗುತ್ತದೆ. ಎಲೆಕ್ಟ್ರೋಲ್ ಬಾಂಡ್ ನಲ್ಲಿ ಭ್ರಷ್ಟಾಚಾರ ಆಗಿದೆಯೋ? ಇಲ್ಲವೊ? ವಿಜಯಿಂದ್ರ ಅವರನ್ನು ಮಾಧ್ಯಮಗಳು ಕೇಳಬೇಕು. ಸುಪ್ರೀಂ ಕೋರ್ಟ್ ಇದನ್ನು ಅಸಂವಿಧಾನಿಕ ಅಂತಾ ಯಾಕೆ ಹೇಳ್ತು? ಅಲ್ಲಿ ಯಾಕೆ ಸಿಬಿಐ ತನಿಖೆ ಆಗಬಾರದು? ಎಂದು ಪ್ರಶ್ನಿಸಿದರು.
ಇನ್ನು ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿದ ಸಚಿವರು, ಅವರು ಅವರ ದೃಷ್ಟಿಯಲ್ಲಿ ಹೇಳಿರಬಹುದು. ಆದರೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಅಭಿವೃದ್ಧಿ ಸಂಬಂಧಿತ ಸಭೆಗಳು ಕಾಲಕಾಲಕ್ಕೆ ನಡೆಯುತ್ತಿವೆಯಲ್ಲ? ನಾವು ಗ್ಯಾರಂಟಿ ಯೋಜನೆ ಕೊಟ್ಟಿರುವುದು ಅವರಿಗೆ ಹೊಟ್ಟೆ ಕಿಚ್ಚು ಹೆಚ್ಚಿಸಿದೆ. ಹೀಗಾಗಿ ಅವರು ಏನೇನೋ ಹೇಳ್ತಿದ್ದಾರೆ. ಅದರಲ್ಲೂ ಇದೀಗ ಆಧಿವೇಶನ ಬಂದಿದೆ ಹೀಗಾಗಿ ಏನೇನೋ ಆರೋಪ ಮಾಡ್ತಿದ್ದಾರೆ. ಇವರ ಕಾಲದಲ್ಲಿ ಏನು ಅಭಿವೃಧಿ ಆಗಿದೆಯಂತೆ? ಹತ್ತು ವರ್ಷ ಮೋದಿ ಅವಧಿಯಲ್ಲಿ ಏನಾಗಿದೆ ಅಭಿವೃದ್ಧಿ ಅದಕ್ಕೆ ಸ್ಪಷ್ಟೀಕರಣ ಕೊಡ್ತಾರೆ. ಒಟ್ಟಿನಲ್ಲಿ ಯಾವಾಗಲೂ ಎಲ್ಲದಕ್ಕೂ ಆರೋಪ ಮಾಡುತ್ತಿರುತ್ತಾರೆ ಎಂದು ತಿರುಗೇಟು ನೀಡಿದರು.
ರಾಜ್ಯ ಸರ್ಕಾರ ಕೈ ಹೈಕಮಾಂಡ ಆರೋಪ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಆರೋಪಗಳಿಗೆ ನಾವೇನು ಪ್ರತಿಕ್ರಿಯೆ ಕೊಡಲು ಬರುವುದಿಲ್ಲ. ಈ ಪ್ರಕರಣದಲ್ಲಿ ಮೂರು ಏಜೆನ್ಸಿಗಳಿಂದ ತನಿಖೆ ನಡೆದಿದೆ. ಸಿಬಿಐ ಇದೆ, ಎಸ್ಐಟಿ ಇದೆ, ಇಡಿ ಇದೆ. ತನಿಖೆ ನೆಡಯುವ ಮೊದಲೇ ಈ ರೀತಿ ಆರೋಪ ಮಾಡಿದರೆ ಏನು ಹೇಳೋಣ? ಅವರ ಹಗರಣಗಳ ಬಗ್ಗೆ ನಾನು ಮಾತನಾಡಲು ಹೋಗಲ್ಲ. ಅವರು ಟೀಕೆ ಮಾಡುತ್ತಿದ್ದಾರೆ ಮಾಡಲಿ ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.
ಇನ್ನು ಬಸವರಾಜ ರಾಯರೆಡ್ಡಿ ಅನುದಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಯಾವ ರೀತಿ ಅನುದಾನ ಬಂದಿಲ್ಲ ಎನ್ನುವುದು ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ಅವರನ್ನೇ ಕೇಳಬೇಕು. 56-60 ಕೋಟಿ ಅಭಿವೃದ್ಧಿಗಾಗಿ ಖರ್ಚು ಮಾಡಿದ್ದೇವೆ. ರಾಯರೆಡ್ಡಿ ಅವರು ಹಿರಿಯ ನಾಯಕರು. ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ ಕೇಳಿದಷ್ಟು ಹೆಚ್ಚಿನ ಅನುದಾನ ಸಿಕ್ಕಿಲ್ಲ ಅಂತಾ ಹಾಗೆ ಹೇಳಿರಬಹುದು ಎಂದರು.




