ಬೆಂಗಳೂರು : ನಾಡಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ ಏಕತೆ ಹಾಗೂ ಸಮೃದ್ಧಿಯ ಸಂಕೇತವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಬೆಂಗಳೂರನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಲೋಕಾರ್ಪಣೆಗೆ ಪೂರ್ವಭಾವಿಯಾಗಿ ಇಂದು ಉದ್ಘಾಟನಾ ಅಭಿಯಾನಕ್ಕೆ ಚಾಲನೆ ನೀಡಿದರು.
ಸಮಗ್ರ ದೇವನಹಳ್ಳಿಯ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್
ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಇತಿಹಾಸ ಗೊತ್ತಾಗಬೇಕು. ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಉದ್ಘಾಟನೆಗೆ ಪ್ರಧಾನಿಯವರು ಆಗಮಿಸಲಿದ್ದಾರೆ. ಆದೇ ಸಂದರ್ಭದಲ್ಲಿ ಪ್ರಧಾನಿಯವರಿಂದಲೇ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟನೆ ಮಾಡಿಸಲಾಗುವುದು. ಬೆಂಗಳೂರಿನ ಶ್ರೀಮಂತ ಇತಿಹಾಸದಲ್ಲಿ ಕೆಂಪೇಗೌಡರ ಹೆಸರು ಅಗ್ರಮಾನ್ಯವಾಗಿರಬೇಕು. ಬೆಂಗಳೂರು ನಗರದ ಒಳಭಾಗದಲ್ಲಿಯೂ ಕೆಂಪೇಗೌಡರ ಪ್ರತಿಮೆ ಇರುವ ಅವಶ್ಯಕತೆ ಇದೆ. ಕೆಂಪೇಗೌಡ ಪ್ರತಿಷ್ಠಾನಕ್ಕೆ 50 ಕೋಟಿ ರೂ. ವೆಚ್ಚದಲ್ಲಿ ಕೆಲಸವನ್ನು ಪ್ರಾರಂಭಿಸಲಾಗಿದೆ. ದೇವನಹಳ್ಳಿಯ ಕೋಟೆಯನ್ನು ಅಭಿವೃದ್ಧಿಗೊಳಿಸಲಾಗುವುದು. ದೇವನಹಳ್ಳಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗುತ್ತಿದೆ. ಸಮಗ್ರ ದೇವನಹಳ್ಳಿಯ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಿ, ಅತ್ಯಾಧುನಿಕ ಟೌನ್ಶಿಪ್ ಮಾಡಲಾಗುವುದು ಎಂದರು.
ಬೆಂಗಳೂರಿನ ಸುತ್ತಲೂ ನಾಲ್ಕು ಸ್ಯಾಟಿಲೈಟ್ ಟೌನ್ಗಳ ನಿರ್ಮಾಣ
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ ಗೆ ಚಾಲನೆ ನೀಡಲಾಗಿದೆ. ಸಬ್ ಅರ್ಬನ್ ರೈಲು, ಪಿಆರ್ ಆರ್ ರಸ್ತೆಗಳ ನಿರ್ಮಾಣ ಕಾರ್ಯಗಳಿಗೆ ಟೆಂಡರ್ ಕರೆಯಲಾಗಿದೆ. ಬೆಂಗಳೂರಿನ ಸುತ್ತಲೂ ನಾಲ್ಕು ಸ್ಯಾಟಿಲೈಟ್ ಟೌನ್ಗಳನ್ನು ನಿರ್ಮಾಣ ಮಾಡಲಾಗುವುದು. ಬರುವ ದಿನಗಳಲ್ಲಿ ಲಾಲ್ಬಾಗ್ನಲ್ಲಿಯೂ ಕೆಂಪೇಗೌಡ ಪ್ರತಿಮೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡರ ಥೀಂ ಪಾರ್ಕ್ಗೆ ನಿರ್ಮಾಣ
ನಾಡಪ್ರಭು ಕೆಂಪೇಗೌಡರ ಸೇವೆ ಸದಾಕಾಲ ಶಾಶ್ವತವಾಗಿರಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಅತ್ಯಂತ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತೀರ್ಮಾನಿಸಿದ್ದರು. ಪ್ರತಿಮೆ ಜೊತೆಗೆ ಥೀಂ ಪಾರ್ಕ್ಗೆ ನಿರ್ಮಿಸಲಾಗುತ್ತಿದ್ದು, ಇಡೀ ರಾಜ್ಯಕ್ಕೆ ನಾಡಪ್ರಭು ಕೆಂಪೇಗೌಡರಿಂದ ಪ್ರೇರಣೆ ದೊರೆಯುವಂತಾಗಲು ಪ್ರತಿ ಜಿಲ್ಲೆ ಗ್ರಾಮಗಳಿಂದ ಮಣ್ಣನ್ನು ಮತ್ತು ಕೆರೆಯ ನೀರನ್ನು ತಂದು ಇಲ್ಲೀ ವನ ನಿರ್ಮಿಸುವ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದರು.
ಆಧುನಿಕ ನಾಗರಿಕತೆಯ ನಿರ್ಮಾಪಕರು ಕೆಂಪೇಗೌಡರು
ಯಾವ ದೇಶಕ್ಕೆ ಇತಿಹಾಸವಿದೆಯೋ, ಆ ದೇಶಕ್ಕೆ ಭವಿಷ್ಯವಿದೆ. ಇತಿಹಾಸವನ್ನು ಬಲ್ಲವನು ಭವಿಷ್ಯವನ್ನು ನಿರ್ಮಿಸುತ್ತಾನೆ. ಕದಂಬರು, ರಾಷ್ಟ್ರಕೂಟರು, ವಿಜಯನಗರ ಸಾಮ್ರಾಜ್ಯರು, ಹೊಯ್ಸಳ, ಇವೆಲ್ಲರೂ ತಮ್ಮ ಅವಧಿಯಲ್ಲಿ ಹಲವಾರು ಜನಕಲ್ಯಾಣ ಕೆಲಸಗಳನ್ನು ಮಾಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯ ಸುವರ್ಣಯುಗ. ಕೆಂಪೇಗೌಡರು ಪಾಳೆಯಗಾರರಾಗಿ ತಮ್ಮ ಆಡಳಿತಾವಧಿಯಲ್ಲಿ ಕೆರೆಕಟ್ಟೆಗಳು, ದೇವಸ್ಥಾನಗಳು, ಸಂಪಂಗಿ ಕೆರೆ, ಹಲಸೂರು ಕೆರೆ, ಕೆಂಪಾಂಬುಧಿ ಕೆರೆ ನಿರ್ಮಿಸಿದರು. ದೇವನಹಳ್ಳಿಯಿಂದ ಮಾಗಡಿವರೆಗೂ ಕೆಂಪೇಗೌಡರ ಕೆಲಸಗಳು ಸಾಕ್ಷಿಯಾಗಿ ನಿಂತಿವೆ. ಆಧುನಿಕ ನಾಗರಿಕತೆಯನ್ನು ನಿರ್ಮಾಪಕರು ಕೆಂಪೇಗೌಡರು ಮುಂದಿನ ಜನಾಂಗಕ್ಕೆ ಎಲ್ಲ ಆಧುನಿಕ ಸೌಲಭ್ಯಗಳಿರುವ ನಗರವನ್ನು ಕಟ್ಟಬೇಕೆಂಬ ದೂರದೃಷ್ಟಿಯನ್ನು ಹೊಂದಿದ್ದರು. ಕೇವಲ ಕಟ್ಟಡಗಳಿಂದ ನಿರ್ಮಾಣವಾಗಿರುವುದು ನಗರವಲ್ಲ. ಅದರಲ್ಲಿ ಸಂಸ್ಕøತಿ, ಪರಂಪರೆ, ಸಮೃದ್ಧಿ ಇರುವ ನಾಗರಿಕತೆಯ ಚಿತ್ರವನ್ನ ನಮಗೆ ಕಟ್ಟಿಕೊಟ್ಟಿದ್ದಾರೆ. ಪ್ರತಿ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿಯಿಂದ ಕೂಡಿದ್ದರೆ ಮಾತ್ರ ದೇಶದ ಅಭಿವೃದ್ಧಿಯ ಮಾನದಂಡ ಎನ್ನಲಾಗಿದೆ ಎಂದು ತಿಳಿಸಿದರು.




