ಮೈಸೂರಿನ ಗೌರವಕ್ಕೆ ಮತ್ತೊಂದು ಸಾಧನೆ ಸೇರ್ಪಡೆಯಾಗಿದೆ. ಕೆಎಸ್ಆರ್ಟಿಸಿ ಮೈಸೂರು ನಗರ ಸಾರಿಗೆ ವಿಭಾಗಕ್ಕೆ ಕೇಂದ್ರ ಸರ್ಕಾರದಿಂದ 2025ರ “ಅವಾರ್ಡ್ ಆಫ್ ಎಕ್ಸಲೆನ್ಸ್ ಇನ್ ಅರ್ಬನ್ ಟ್ರಾನ್ಸ್ಪೋರ್ಟ್” ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿ ನಗರ ಸಾರಿಗೆಯಲ್ಲಿ ಕೈಗೊಂಡ ಅತ್ಯುತ್ತಮ ಯೋಜನೆಗಳ ವರ್ಗದಲ್ಲಿ ದೊರೆತಿದ್ದು, ಮೈಸೂರು ವಿಭಾಗದ ‘ಧ್ವನಿ ಸ್ಪಂದನ’ ಯೋಜನೆ ಅದಕ್ಕೆ ಕಾರಣವಾಗಿದೆ. ಈ ಯೋಜನೆ ಭಾರತದಲ್ಲಿ ಮೊದಲ ಬಾರಿಗೆ ಜಾರಿಯಾದ ಆನ್ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಆಗಿದೆ.
ಈ ವ್ಯವಸ್ಥೆ ದೃಷ್ಟಿ ವಿಕಲ ಚೇತನ ಪ್ರಯಾಣಿಕರಿಗೆ ಆಶೀರ್ವಾದವಾಗಿದೆ. ಬಸ್ ಗುರುತಿಸುವುದು, ಪ್ರವೇಶದ ದಾರಿ ಕಂಡುಹಿಡಿಯುವುದು ಮತ್ತು ಸುರಕ್ಷಿತ ಪ್ರಯಾಣ ಮಾಡಲು ಧ್ವನಿ ಆಧರಿತ ಸೂಚನೆಗಳನ್ನು ಒದಗಿಸುತ್ತದೆ. ಇದರ ಫಲವಾಗಿ ಅವರ ಆತ್ಮವಿಶ್ವಾಸ ಮತ್ತು ಸಂಚಾರದ ಸ್ವಾತಂತ್ರ್ಯದಲ್ಲಿ ಮಹತ್ತರ ಬದಲಾವಣೆ ಕಂಡಿದೆ.
ಈ ತಂತ್ರಜ್ಞಾನವನ್ನು ಐಐಟಿ ದೆಹಲಿಯ ರೈಸ್ಡ್ ಲೈನ್ಸ್ ಫೌಂಡೇಶನ್ ಜರ್ಮನಿಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ್ದು, 400ಕ್ಕೂ ಹೆಚ್ಚು ದೃಷ್ಟಿ ವಿಕಲ ಪ್ರಯಾಣಿಕರಿಗೆ ತರಬೇತಿ ನೀಡಲಾಗಿದೆ. ಪ್ರಶಸ್ತಿಯನ್ನು ಕೇಂದ್ರ ಸಚಿವ ಮನೋಹರ್ ಲಾಲ್ ಹಾಗೂ ರಾಜ್ಯ ಸಚಿವ ತೋಕನ್ ಸಾಹು ಅವರಿಂದ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಸ್ವೀಕರಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

