ದೇಶದಲ್ಲಿ ಕೋವಿಡ್ ಮೂರನೇ ಅಲೆ ಶುರುವಾಗಿದ್ದು, ಓಮಿಕ್ರಾನ್ ವೈರಸ್ ಲಗ್ಗೆ ಇಟ್ಟಿದೆ. ಈಗಾಗಲೇ ದೇಶದಲ್ಲಿ ಓಮಿಕ್ರಾನ್ ವೈರಸ್ ತಗುಲಿರುವವರ ಸಂಖ್ಯೆ ಇನ್ನೂರರ ಗಡಿ ದಾಟಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಲಸಿಕೆ ತೆಗೆದುಕೊಳ್ಳಲು ಸೂಚಿಸಲಾಗಿದೆ. ಲಸಿಕೆ ಪಡೆದರಷ್ಟೇ ಮಾಲ್, ಥಿಯೇಟರ್ಗಳಿಗೆ ಎಂಟ್ರಿ ಎಂಬ ಘೋಷಣೆಯೂ ಆಗಿದೆ. ಎಷ್ಟೋ ಜನ ಮೊದಲ ಡೋಸ್ ಅಷ್ಟೇ ತೆಗೆದುಕೊಂಡು ಸುಮ್ಮನಾಗಿದ್ದರು. ಆದ್ರೆ ಸರ್ಕಾರದ ಈ ಘೋಷಣೆಯಿಂದ ಎರಡನೇ ಡೋಸ್ ಕೂಡ ಪಡೆದಿದ್ದಾರೆ.
ಇನ್ನು ನಮ್ಮ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿಯಾಗತ್ತಾ ಅನ್ನೋ ಟೆನ್ಶನ್ ಇರುವಾಗಲೇ, ಮಧ್ಯಪ್ರದೇಶದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲು ಆದೇಶ ನೀಡಲಾಗಿದೆ. ರಾತ್ರಿ 11ಗಂಟೆಯಿಂದ ಬೆಳಿಗ್ಗೆ5 ಗಂಟೆಯವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಬಗ್ಗೆ ಘೋಷಣೆ ಮಾಡಿರುವ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಈಗಾಗಲೇ ದೆಹಲಿ, ಮಹಾರಾಷ್ಟ್ರ, ಗುಜರಾತ್ನಲ್ಲಿ ಹಲವು ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಜನರು ಬರುತ್ತಲೇ ಇರುತ್ತಾರೆ. ಹಾಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು. ಕೋವಿಡ್ ನಿಯಮಗಳನ್ನು ಅನುಸರಿಸುವುದರ ಜೊತೆಗೆ, ನೈಟ್ ಕರ್ಫ್ಯೂಗೂ ಕೂಡ ಬೆಂಬಲ ನೀಡಬೇಕೆಂದು ಹೇಳಿದ್ದಾರೆ.
ಅಲ್ಲದೇ ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಯಾರಿಗಾದರೂ ಓಮಿಕ್ರಾನ್ ಲಕ್ಷಣ ಕಾಣಿಸಿಕೊಂಡಿದ್ದು, ಮನಯಲ್ಲಿ ಐಸೋಲೇಶನ್ಗೆ ಜಾಗವಿಲ್ಲದಿದ್ದರೆ, ಅಂಥವರು ಆಸ್ಪತ್ರೆಗೆ ಬಂದು ಅಡ್ಮಿಟ್ ಆಗಬಹುದು. ಇನ್ನು ಮಕ್ಕಳು ಶಾಲೆಯಲ್ಲಿ 50% ಅಟೆಂಡೆನ್ಸ್ ಹೊಂದಿದರೆ ಸಾಕು ಎಂದು ಸಿಎಂ ಚೌಹಾಣ್ ಹೇಳಿದ್ದಾರೆ.
ಇಷ್ಟೇ ಅಲ್ಲದೇ, ಸಿಎಂ ಚೌಹಾಣ್ ಅವರು ನೀಡಿದ ಇನ್ನೊಂದು ಹೇಳಿಕೆ ಮಧ್ಯ ಪ್ರದೇಶದಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರನೂ ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಮಾಡಿದೆ. ಅದೇನೆಂದರೆ, ಕೋವಿಡ್ ವ್ಯಾಕ್ಸಿನ್ ಎರಡೂ ಡೋಸ್ ಪಡೆಯದಿದ್ದಲ್ಲಿ ಅಂಥ ಸರ್ಕಾರಿ ನೌಕರರಿಗೆ ಸಂಬಳ ನೀಡಲಾಗುವುದಿಲ್ಲ ಅಂತಾ ಹೇಳಿದ್ದಾರೆ. ಅಲ್ಲದೇ ಕೋವಿಡ್ ವ್ಯಾಕ್ಸಿನ್ ಪೂರ್ತಿಯಾಗಿದ್ದರೆ ಮಾತ್ರ, ಮಾಲ್, ಜಿಮ್ಗೆ ಹೋಗಬಹುದು ಎಂದಿದ್ದಾರೆ.