31 ಶಾಸಕರ ಬೆನ್ನಲ್ಲೇ ಈಗ 24 MLCಗಳ ಬಂಡಾಯ?

ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಸಚಿವ ಸಂಪುಟ ಪುನಾರಚನೆಗೆ 31 ಶಾಸಕರು ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದ ಬೆನ್ನಲ್ಲೇ, ಇದೀಗ 24 ಮಂದಿ ವಿಧಾನ ಪರಿಷತ್ ಸದಸ್ಯರು ಕೂಡ ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ.

24 MLCಗಳ ಪ್ರತಿನಿಧಿ ಮಂಡಳಿ, ಮಲ್ಲಿಕಾರ್ಜುನ ಖರ್ಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿ, ಸಚಿವ ಸಂಪುಟದಲ್ಲಿ ಪರಿಷತ್ ಸದಸ್ಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದೆ. ಈ ಸಂಬಂಧ 24 MLCಗಳ ಸಹಿ ಇರುವ ಸಂಯುಕ್ತ ಪತ್ರವನ್ನು ಖರ್ಗೆ ಅವರಿಗೆ ಸಲ್ಲಿಸಲಾಗಿದೆ.

ಸಂಪುಟದಲ್ಲಿ MLCಗಳಿಗೆ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾನತೆ ಹಾಗೂ ನಿರುತ್ಸಾಹ ಭಾವನೆಗೆ ಕಾರಣವಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಪರಿಸ್ಥಿತಿ ಮುಂದುವರಿದರೆ, ಸಮರ್ಥ ನಾಯಕರು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ವಿಧಾನಸಭಾ ಟಿಕೆಟ್‌ಗಳತ್ತ ಮುಖ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದು ಪಕ್ಷದ ಒಳಗುಂಪು ರಾಜಕೀಯಕ್ಕೆ ಕಾರಣವಾಗಿ, ಸಂಘಟನೆಯನ್ನು ದುರ್ಬಲಗೊಳಿಸಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಪರಿಷತ್ ಸದಸ್ಯರು ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು MLCಗಳು ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಕನಿಷ್ಠ ಐದು ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಬೇಕು ಎಂದು MLCಗಳು ಒತ್ತಾಯಿಸಿದ್ದಾರೆ. ಜೊತೆಗೆ ವಿವಿಧ ವರ್ಗಗಳಿಗೆ ಸಮತೋಲನದ ಪ್ರಾತಿನಿಧ್ಯ ನೀಡುವಂತೆ ಸಲಹೆ ನೀಡಿದ್ದಾರೆ

ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರದಿಂದ ಒಬ್ಬರು, ಕೆಳಮನೆ / ನಾಮನಿರ್ದೇಶಿತ ವರ್ಗದಿಂದ ಒಬ್ಬರು ಹೀಗೆ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಪರಿಗಣಿಸಬೇಕೆಂದು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author