ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನೋ ಗಾದೆ ಮಾತಿನಂತೆ, ಹಲವು ಸರ್ಕಾರಿ ಅಧಿಕಾರಿಗಳಿಗೆ ಲಂಚ ತೆಗೆದುಕೊಳ್ಳುವ ದುರ್ಬದ್ಧಿ ಎಂದಿಗೂ ಹೋಗಲ್ಲ ಅನ್ಸತ್ತೆ. ಸರ್ಕಾರದ ಸಂಬಳ ತೆಗೆದುಕೊಳ್ತಿದ್ರೂ, ಸಾರ್ವಜನಿಕರ ಕೆಲಸ ಮಾಡಿಕೊಡಲು ಕೈಚಾಚುತ್ತಲೇ ಇರ್ತಾರೆ.
ಹಾಸನದಲ್ಲೂ ಇಂಥದ್ದೇ ಘಟನೆ ನಡೆದಿದ್ದು, ಲಂಚ ಸ್ವೀಕರಿಸುವಾಗಲೇ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ನಗರದ ಎನ್.ಆರ್.ವೃತ್ತದಲ್ಲಿರುವ ಪಂಚಾಯತ್ ರಾಜ್ ಎಂಜಿನಿಯರಿಂಗ್ ಕಚೇರಿ ಮೇಲೆ, ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿತ್ತು. ಲೆಕ್ಕ ವಿಭಾಗದ ಅಧೀಕ್ಷಕ ರಾಮಚಂದ್ರು ಹಾಗೂ ಪ್ರಥಮ ದರ್ಜೆ ಸಹಾಯಕಿ ಲತಾ, ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಕಾಮಗಾರಿ ಬಿಲ್ ಮಂಜೂರಾತಿ ಮಾಡಲು ಬೇಲೂರಿನ ಶಶಿಯಿಂದ, ತಲಾ 1 ಸಾವಿರ ಪಡೆಯುತ್ತಿದ್ರು. ಈ ವೇಳೆ ಸಾರ್ವಜನಿಕರಂತೆ ಕಟ್ಟಡದೊಳಗೆ ಎಂಟ್ರಿ ಕೊಟ್ಟಿದ್ದ ಲೋಕಾಯುಕ್ತ ಪೊಲೀಸರು, ನಿಧಾನವಾಗಿ ಮೆಟ್ಟಿಲು ಹತ್ತಿ ಕಚೇರಿಯೊಳಗೆ ಹೋಗ್ತಾರೆ.
ಆ ವೇಳೆ ಶಶಿಯಿಂದ ಪಡೆದ ದುಡ್ಡನ್ನ ಅಧೀಕ್ಷಕ ರಾಮಚಂದ್ರು, ಕೈಯ್ಯಲ್ಲಿ ಹಿಡಿದುಕೊಂಡಿದ್ರು. ದಿಢೀರ್ ಎಂಟ್ರಿ ಕೊಟ್ಟಿದ್ದ ಲೋಕಾಯುಕ್ತ ಟೀಂ, ರಾಮಚಂದ್ರರ ಕೈಗಳನ್ನೇ ಲಾಕ್ ಮಾಡಿದ್ರು. ಅಧಿಕಾರಿಗಳ ತಂಡ ಬಂದಿದೆ ಅಂತಾ ಗೊತ್ತಾಗೋದ್ರೊಳಗೆ ರಾಮಚಂದ್ರ ತಗ್ಲಾಕಿಕೊಂಡಿದ್ದಾರೆ.
ಸದ್ಯ, ಲೋಕಾಯುಕ್ತ ಇನ್ಸ್ಪೆಕ್ಟರ್ಸ್ ಚಂದ್ರಶೇಖರ್ ಮತ್ತು ಶಿಲ್ಪಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.