Wednesday, October 29, 2025

Latest Posts

ಸಿದ್ದು 2 ಅಸ್ತ್ರ ಪ್ರಯೋಗ ಸಫಲ ಆಗುತ್ತಾ?

- Advertisement -

ನವೆಂಬರ್‌ ತಿಂಗಳ ಹೊಸ್ತಿಲಲ್ಲಿ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ, ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಪವರ್‌ ಶೇರಿಂಗ್‌ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಪರೋಕ್ಷವಾಗಿ ಯುದ್ಧ ಆರಂಭಿಸಿದ್ದಾರೆ. ನಾನೇ 5 ವರ್ಷ ಸಿಎಂ ಅಂತಿದ್ದ ಸಿದ್ದು, ಈಗ ಎಲ್ಲವನ್ನೂ ಹೈಕಮಾಂಡ್‌ ಮೇಲೆ ಹಾಕಿದ್ದಾರೆ. ಹೈಕಮಾಂಡ್ ತೀರ್ಮಾನಿಸಿದ್ರೆ 5 ವರ್ಷ ಸಿಎಂ ನಾನೇ ಎಂದು, ಹೇಳಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಮತ್ತೊಂದೆಡೆ ಸಿದ್ದರಾಮಯ್ಯ ಬೆನ್ನಿಗೆ ಅಹಿಂದ ನಾಯಕರು ನಿಂತಿದ್ದಾರೆ. ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ. ಯಾವ ಪವರ್ ಶೇರಿಂಗ್ ಚರ್ಚೆಯೂ ಇಲ್ಲ ಎನ್ನುತ್ತಿದ್ದಾರೆ. ತಕ್ಷಣವೇ ಗೊಂದಲ ಪರಿಹರಿಸಿ ಎಂದು ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಜೊತೆಗೆ ಪ್ಲಾನ್‌ A ವರ್ಕೌಟ್‌ ಆಗದಿದ್ರೆ ಪ್ಲಾನ್‌ B ರೆಡಿ ಮಾಡಿಟ್ಟುಕೊಂಡಿದ್ದಾರೆ. ಒಂದು ವೇಳೆ ಅಧಿಕಾರ ಹಂಚಿಕೆ ವಿಚಾರ ಚರ್ಚೆಗೆ ಬಂದರೆ, 2 ಅಸ್ತ್ರಗಳ ಪ್ರಯೋಗಕ್ಕೆ ಸಿದ್ದು ಬಣ ರೆಡಿ ಆಗಿದೆ.

ಸಿಎಂ ಸಿದ್ದರಾಮಯ್ಯ ಬಣ ಹೆಚ್ಚುವರಿ ಡಿಸಿಎಂ ಆಯ್ಕೆಗೆ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಾಯ ಮಾಡಲಿದೆ. ಈ 2 ವಿಷಯಗಳನ್ನು ಮುನ್ನಲೆಗೆ ತರಲು ಸಿಎಂ ಬಣ ಚಿಂತನೆ ನಡೆಸಿದ್ದು, ಸಂಪುಟ ಪುನಾರಚನೆ ವೇಳೆ ಹೆಚ್ಚುವರಿ ಡಿಸಿಎಂ ಆಯ್ಕೆಗೆ ಪಟ್ಟು ಹಿಡಿಯಲಿದೆ. ಸಮುದಾಯವಾರು ಡಿಸಿಎಂ ಸ್ಥಾನಕ್ಕೆ ಒತ್ತಡ ಹೇರುವ ಸಾಧ್ಯತೆ ಇದೆ. ಮುಂದಿನ ತಿಂಗಳ ದೆಹಲಿ ಭೇಟಿ ವೇಳೆ ಇದೇ ವಿಷಯ ಪ್ರಸ್ತಾಪ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಯ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಗಡುವಿನ ತನಕ ಮೌನವಾಗಿರಲು ನಿರ್ಧರಿಸಿದಂತಿದೆ. ಯಾಕೆಂದ್ರೆ, ತಾನೆಷ್ಟು ನಿಷ್ಠನಾಗಿದ್ದೇನೆಂದು ಹೈಕಮಾಂಡ್‌ಗೆ ತೋರಿಸುವುದು ತಂತ್ರದ ಭಾಗವಾಗಿರಬಹುದು. ಇದನ್ನೇ ವರಿಷ್ಠರ ಮುಂದಿಡುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ರಾಜಕೀಯದಲ್ಲಿ ಕೊನೆಯ ಸಮಯದಲ್ಲಿ ಆಡುವ ಮಾತುಗಳು ಬಹಳ ಮಹತ್ವ ಪಡೆಯುತ್ತವೆ. ಹೀಗಾಗಿಯೇ ತನ್ನ ಬೆಂಬಲಿಗರಿಗೂ ಡೆಡ್‌ಲೈನ್‌ವರೆಗೆ ಸುಮ್ಮನಿರಿ ಎಂಬ ಸಂದೇಶ ರವಾನಿಸಿದ್ದಾರೆ.

ಒಟ್ನಲ್ಲಿ ಕುರ್ಚಿ ಆಟ ಕ್ಲೈಮ್ಯಾಕ್ಸ್‌ಗೆ ಬರುತ್ತಿದ್ದಂತೆ ತಂತ್ರ ಪ್ರತಿತಂತ್ರಗಳು ಜೋರಾಗಿಯೇ ನಡೆಯುತ್ತಿವೆ. ರಾಜಕೀಯ ಬತ್ತಳಿಕೆಯಲ್ಲಿರುವ ಹಳೇ ಪಟ್ಟುಗಳು ಜೀವ ಪಡೆದುಕೊಂಡಿವೆ.

- Advertisement -

Latest Posts

Don't Miss