ನಮ್ಮ ಮೆಟ್ರೋ ಗುಡ್‌ನ್ಯೂಸ್‌! ನೆಲಮಂಗಲ–ದಾಬಸ್‌ಪೇಟೆ–ತುಮಕೂರು

ಬೆಂಗಳೂರು ಮೆಟ್ರೋ ಮೊದಲ ಬಾರಿಗೆ ಅಂತರಜಿಲ್ಲೆ ಸಂಪರ್ಕದತ್ತ ಹೆಜ್ಜೆಯಿಡುತ್ತಿದೆ. 59.6 ಕಿ.ಮೀ ಉದ್ದದ ಹಸಿರು ಮಾರ್ಗ ವಿಸ್ತರಣೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ ತಯಾರಿಸಲು BMRCL ಟೆಂಡರ್ ಆಹ್ವಾನಿಸಿದೆ. ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಯಾಗಲಿರುವ ಈ ಯೋಜನೆಗೆ ಕಂಪನಿಗಳು 4.5 ಲಕ್ಷ ರೂಪಾಯಿ ಠೇವಣಿ ಇಡಬೇಕಿದ್ದು, ನವೆಂಬರ್ 20ರವರೆಗೆ ಬಿಡ್ ಸಲ್ಲಿಸಲು ಗಡುವು ನಿಗದಿಯಾಗಿದೆ.

ನವೆಂಬರ್ 21ರಂದು ಟೆಂಡರ್ ತೆರೆಯುವ ಸಾಧ್ಯತೆಯಿದ್ದು, ಡಿಪಿಆರ್ ತಯಾರಿಕೆಗೆ ಐದು ತಿಂಗಳ ಅವಧಿ ನೀಡಲಾಗಿದೆ. ಮಾದಾವರ–ತುಮಕೂರು ಮಾರ್ಗವು ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತ್ಸಂದ್ರ ಮಾರ್ಗವಾಗಿ ಸಾಗಲಿರುವ ಈ ಯೋಜನೆಯ ಮೊದಲ ಹಂತಕ್ಕೆ ಸುಮಾರು 20,649 ಕೋಟಿ ರೂಪಾಯಿ ವೆಚ್ಚವಾಗುವ ಅಂದಾಜು ಇದೆ.

2024–25ರ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದ ಪ್ರಮುಖ ಸಾರಿಗೆ ಯೋಜನೆಗಳಲ್ಲಿ ಒಂದಾದ ಈ ವಿಸ್ತರಣೆ ಮೂಲಕ ಒಂದು ದಿಕ್ಕಿನಲ್ಲಿ ಪ್ರತೀ ಗಂಟೆಗೆ ಸುಮಾರು 15 ಸಾವಿರ ಪ್ರಯಾಣಿಕರು ಸಂಚರಿಸುವ ಸಾಧ್ಯತೆಯಿದೆ. ಮಾದಾವರದ BIEC ಇಂದ ತುಮಕೂರುವರೆಗೆ ಒಟ್ಟು 26 ಎಲೆವೇಟೆಡ್‌ ಮೆಟ್ರೋ ನಿಲ್ದಾಣಗಳು ಬರುತ್ತದೆ.

ಈ ನಿಲ್ದಾಣಗಳಲ್ಲಿ ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವಿವರ್ ಕಾಲೋನಿ, ನೆಲಮಂಗಲ ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ. ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನ್‌ಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಾಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ (ಸಿದ್ಧಾರ್ಥ ಕಾಲೇಜು), ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣ ಪಾಳ್ಯ ಮತ್ತು ಶಿರಾ ಗೇಟ್ ಸೇರಿದಂತೆ ಹಲವಾರು ಪ್ರಮುಖ ಸ್ಥಳಗಳು ಒಳಗೊಂಡಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author