ನವದೆಹಲಿ : ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ದೇಶಾದ್ಯಂತ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಕಾನ್ಪುರದ ನವಜೋಡಿ ಭಾರತದ ಸ್ವಿಟ್ಜರ್ಲೆಂಡ್ ಎಂದೇ ಕರೆಯಲಾಗುವ ಕಾಶ್ಮೀರದ ಪಹಲ್ಗಾಮ್ಗೆ ತೆರಳಿದ್ದರು. ಒಂದು ರಾತ್ರಿ ಕಳೆದಿದ್ದರೆ ಸಂಭ್ರಮದಿಂದ ವಾಪಾಸಾಗುತ್ತಿದ್ದ ಈ ಕುಟುಂಬ, ಈಗ ಶೋಕಸಾಗರದಲ್ಲಿ ಮುಳುಗಿದೆ. ಇಲ್ಲಿ ಉಸಿರು ಚೆಲ್ಲಿದವರ ಮಾಹಿತಿ ನೋಡುವುದಾದರೆ ಒಬ್ಬೊಬ್ಬರದು ಒಂದೊಂದು ದುರಂತ ಅಂತ್ಯವನ್ನು ತೆರೆದಿಡುತ್ತಿದೆ.
ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಕಾನ್ಪುರದ ಉದ್ಯಮಿ 31 ವರ್ಷದ ಶುಭಂ ದ್ವಿವೇದಿ, ಪತ್ನಿಯೊಂದಿಗೆ ಕಾಶ್ಮೀರದ ಸೌಂದರ್ಯ ಸವಿಯಲು ಬೈಸರ್ ವ್ಯಾಲಿಗೆ ಬಂದಿದ್ದರು. ಆದರೆ ಮತಾಂಧ ಮನಸ್ಥಿತಿಯಲ್ಲಿದ್ದ ಪಾಕಿಸ್ತಾನದ ಈ ರಕ್ತಪಿಪಾಸುಗಳು ನವದಂಪತಿಯ ಬದುಕನ್ನೇ ಕಿತ್ತುಕೊಂಡಿದ್ದಾರೆ. ಮುಂದೆ ಸಾಗಿದ್ದ ಪತ್ನಿಯನ್ನು ಸೇರಲು ತೆರಳುತ್ತಿದ್ದ ನವವಿವಾಹಿತನಿಗೆ ದಿಢೀರ್ ಎದುರಾದ ಉಗ್ರರು ಮೊದಲು ಆತನ ಹೆಸರನ್ನು ಕೇಳಿದ್ದಾರೆ. ಹೆಸರಿನಲ್ಲೂ ಧರ್ಮದ ಅಮಲನ್ನು ತಲೆಗೆ ಹೊಕ್ಕಿಸಿಕೊಂಡಿದ್ದ ಈ ರಣಹೇಡಿಗಳು ಸ್ಥಳದಲ್ಲೇ ಶುಭಂ ದ್ವಿವೇದಿ ತಲೆಗೆ ಗುಂಡಿಟ್ಟು ಕೊಂದಿದ್ದಾರೆ.
ಹೆಸರು ಕೇಳಿ ಕೊಂದೇಬಿಟ್ಟರು..!
ಇನ್ನೂ ಎರಡು ತಿಂಗಳ ಹಿಂದಷ್ಟೇ ಅಂದರೆ ಫೆಬ್ರವರಿ 12ರಂದು ಶುಭಂ ದ್ವಿವೇದಿ ಅವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಏಪ್ರಿಲ್ 17 ರಂದು ಪತ್ನಿ ಸಾನ್ಯಾ ಸೇರಿದಂತೆ ಕುಟುಂಬಸ್ಥರೊಂದಿಗೆ ಶುಭಂ ಕಾಶ್ಮೀರ್ ಪ್ರವಾಸ ಕೈಗೊಂಡಿದ್ದರು. ಪಹಲ್ಗಾಮ್ ಬಳಿಕ ಅವರೆಲ್ಲರೂ ಗುಲ್ಮಾರ್ಗ್ ಮತ್ತು ಸೋನಾಮಾರ್ಗ್ ಸ್ಥಳಗಳಿಗೆ ತೆರಳಲು ಪ್ಲಾನ್ ಮಾಡಿದ್ದರು. ಅಲ್ಲದೆ ಬುಧವಾರ ಏಪ್ರಿಲ್ 23ರಂದು ಕಾಶ್ಮೀರದಿಂದ ವಾಪಸ್ ಬರಲು ಯೋಜನೆ ರೂಪಿಸಿದ್ದರು. ಅಷ್ಟರಲ್ಲಿ ಎದುರಾದ ಭಯೋತ್ಪಾದಕರು ಹೆಸರು ಕೇಳಿ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಶುಭಂ ಸಹೋದರ ಸೌರಭ್ ದ್ವಿವೇದಿ ಕಣ್ಣೀರಾಗಿದ್ದಾರೆ.
ಕಲೀಮಾ ಹೇಳದಿದ್ದಕ್ಕೆ ಜೀವ ತೆಗೆದ್ರು..
ಘಟನೆ ನಡೆದ ದಿನ ಮಂಗಳವಾರ ಮಧ್ಯಾಹ್ನ ಶುಭಂ ಮತ್ತು ಅವರ ಪತ್ನಿ ಕುದುರೆ ಸವಾರಿ ಮಾಡುತ್ತಿದ್ದರು. ಇವರ ಕುಟುಂಬದ ಇತರ ಸದಸ್ಯರು ಹೋಟೆಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಕುದುರೆ ಸವಾರಿಯಲ್ಲಿದ್ದ ಸಂದರ್ಭದಲ್ಲಿ ಇವರತ್ತ ಬಂದ ಭಯೋತ್ಪಾದಕರು, ಹೆಸರು ಕೇಳಿದರು. ಮರುಕ್ಷಣವೇ ಪತ್ನಿಯ ಎದುರಲ್ಲೇ ಶುಭಂ ತಲೆಗೆ ಗುಂಡಿಕ್ಕಿ ಹತ್ಯೆಗೈದರು ಎಂದು ಕುಟುಂಬ ಸದಸ್ಯರ ಮಾಹಿತಿ ಆಧರಿಸಿ ಕಾನ್ಪುರದಲ್ಲಿರುವ ಶುಭಂ ಚಿಕ್ಕಪ್ಪ ಮನೋಜ್ ದ್ವಿವೇದಿ ತಿಳಿಸಿದ್ದಾರೆ. ಅಲ್ಲದೆ ಶುಭಂ ತನ್ನ ಹೆಸರು ಹೇಳಿದ ನಂತರ ಇಸ್ಲಾಮಿಕ್ ಧಾರ್ಮಿಕ ಘೋಷಣೆ ಕಲ್ಮಾ ಪಠಿಸುವಂತೆ ಭಯೋತ್ಪಾದಕರು ಒತ್ತಾಯಿಸಿದ್ದಾರೆ. ಅದನ್ನು ಹೇಳದಿದ್ದಾಗ ಶುಭಂ ತಲೆಗೆ ಗುಂಡು ಹಾರಿಸಿದ್ದಾರೆ. ನಂತರ ಶುಭಂ ಪತ್ನಿ ಬಳಿ ನಿನ್ನ ಪತಿಗೆ ಏನು ಮಾಡಿದೆವು ಎಂಬುದನ್ನು ಹೋಗಿ ನಿಮ್ಮ ಸರ್ಕಾರಕ್ಕೆ ಹೇಳು ಅಂತ ಉಗ್ರರು ತಿಳಿಸಿ ಹೋಗಿದ್ದರು ಎಂದು ಮನೋಜ್ ಭಾವುಕರಾಗಿ ಹೇಳಿದ್ದಾರೆ.
ಸಂತಸದ ಮನೆಯಲ್ಲಿ ಶೋಕ..!
ಇತ್ತ ಕಾನ್ಪುರದ ಮನೆಯಲ್ಲಿ ಶುಭಂ ದ್ವಿವೇದಿ ಸೋದರ ಸಂಬಂಧಿಗೆ ಮಂಗಳವಾರ ಮಧ್ಯಾಹ್ನ ಬಂದ ಫೋನ್ ಕಾಲ್ ಆಘಾತ ಮೂಡಿಸಿತ್ತು. ಶುಭಂಗೆ ಭಯೋತ್ಪಾದಕರು ಗುಂಡಿಟ್ಟು ಕೊಂದಿರುವ ಬಗ್ಗೆ ಆಘಾತಕಾರಿ ಸುದ್ದಿ ತಲುಪಿತು. ಇದರಿಂದ ಇಡೀ ಕುಟುಂಬದಲ್ಲಿ ಭಯ ಮತ್ತು ಆತಂಕ ಉಂಟಾಯಿತು ಎಂದು ಶುಭಂ ಸಹೋದರ ಸೌರಭ್ ದ್ವಿವೇದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶುಭಂ ಅವರ ಕುಟುಂಬ ಬುಧವಾರ ಬೆಳಿಗ್ಗೆ ಕಾಶ್ಮೀರದಿಂದ ಕಾನ್ಪುರಕ್ಕೆ ಹೊರಡುವುದು ನಿಶ್ಚಯವಾಗಿತ್ತು. ಈಗ ಬದುಕುಳಿದವರು ಕಾನ್ಪುರಕ್ಕೆ ತೆರಳಿದ್ದು, ಶುಭಂ ಪಾರ್ಥಿವ ಶರೀರ ಬರಮಾಡಿಕೊಳ್ಳಲು ದುಃಖತಪ್ತರಾಗಿ ಕಾಯುವಂತಾಗಿದೆ. ದಿನದ ಹಿಂದೆಯಷ್ಟೇ ಸಂಭ್ರಮದಲ್ಲಿದ್ದ ಇವರ ಕುಟುಂಬ ಈಗ ಶೋಕಸಾಗರದಲ್ಲಿ ಮುಳುಗಿರುವುದು ನಿಜಕ್ಕೂ ದುರಂತವೇ ಸರಿ..!