Thursday, June 19, 2025

Latest Posts

ಪಹಲ್ಗಾಮ್‌ ದಾಳಿ ಪಾಕ್‌ನ ಹತಾಶೆ ಮತ್ತು ಹೇಡಿತನ : ಉಗ್ರ ರಾಷ್ಟ್ರಕ್ಕೆ ಮೋದಿ ವಾರ್ನಿಂಗ್‌ ಏನು..?

- Advertisement -

ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಇರುವಾಗಲೇ ಕಾಲು ಕೆದರಿ ಉಗ್ರ ರಾಷ್ಟ್ರವೇ ಜಗಳಕ್ಕಿಳಿಯುತ್ತಿದೆ. ಕಳೆದ ಭಾನುವಾರ ಮತ್ತು ಇಂದು ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಗಡಿ ನಿಯಂತ್ರಣ ರೇಖೆ ಎಲ್‌ಒಸಿಯಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಇದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನಿ ಪಡೆಗಳು ಸತತ ನಾಲ್ಕನೇ ರಾತ್ರಿಯೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಹಿಂದಿನ ಮೂರು ಕದನ ವಿರಾಮಗಳು ತುಟ್ಮರಿ ಗಾಲಿ ಮತ್ತು ರಾಂಪುರ ವಲಯಗಳ ಎದುರಿನ ಪ್ರದೇಶಗಳಲ್ಲಿ ನಡೆದಿದೆ.

ಕಳೆದ ವಾರ ಪಹಲ್ಗಾಮ್ ಕಣಿವೆಯಲ್ಲಿ 26 ಜನ ಪ್ರವಾಸಿಗರು ಭಯೋತ್ಪಾದಕ ದಾಳಿಯಲ್ಲಿ ಬಲಿಯಾಗಿದ್ದರು. ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿದೆ. ಕೇಂದ್ರಾಡಳಿತ ಪ್ರದೇಶದ ಕುಪ್ವಾರಾ ಮತ್ತು ಪೂಂಚ್ ಜಿಲ್ಲೆಗಳ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಪಡೆಗಳು ಅತ್ಯಂತ ಕಠಿಣವಾಗಿ ಹಾಗೂ ಪರಿಣಾಮಕಾರಿ ಉತ್ತರ ನೀಡಿವೆ ಎಂದು ಭಾರತೀಯ ಸೇನೆಯು ತಿಳಿಸಿದೆ.

ಹತಾಶೆ , ಹೇಡಿತನ ಎಂದು ಗುಡುಗಿದ ಮೋದಿ..

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡುತ್ತಿದೆ. 26/11ರ ಮುಂಬೈ ದಾಳಿಯ ನಂತರ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯು ಭಾರತದಲ್ಲಿನ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದೆ. ಪಹಲ್ಗಾಮ್ ದಾಳಿಯ ದುಷ್ಕರ್ಮಿಗಳು ಮತ್ತು ಸಂಚುಕೋರರಿಗೆ ಅತ್ಯಂತ ಕಠಿಣ ಶಿಕ್ಷ ನೀಡಲಾಗುವುದು. ಕಾಶ್ಮೀರದ ಕಣಿವೆಯಲ್ಲಿ ಶಾಂತಿ ಮರಳುತ್ತಿರುವ ಸಮಯದಲ್ಲಿ, ಕಾಶ್ಮೀರದ ಪ್ರಸಿದ್ಧ ಪ್ರವಾಸಿ ಸ್ಥಳದಲ್ಲಿ ನಡೆದ ದಾಳಿಯು ಭಯೋತ್ಪಾದನೆಯ ಪೋಷಕರ ಹತಾಶೆ ಮತ್ತು ಹೇಡಿತನವನ್ನು ಎತ್ತಿ ತೋರಿಸುತ್ತದೆ ಎಂದು ಎಂದು ಪಾಕಿಸ್ತಾನವನ್ನು ಉಲ್ಲೇಖಿಸಿ ತಕ್ಕ ಶಾಸ್ತಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ತಮ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನ 121 ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ದಾಳಿಯಲ್ಲಿನ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ. ಪಹಲ್ಗಾಮ್‌ ದಾಳಿಯಿಂದ ನನಗೆ ತುಂಬಾ ನೋವಾಗಿದೆ. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಲಿದೆ. ದಾಳಿಯಿಂದಾಗಿ ಪ್ರತಿಯೊಬ್ಬ ಭಾರತೀಯನಲ್ಲಿ ಕೋಪ ಕುದಿಯುತ್ತಿದೆ. ಭಯೋತ್ಪಾದನೆಯ ಸವಾಲನ್ನು ಎದುರಿಸುವ ನಮ್ಮ ಸಂಕಲ್ಪವನ್ನು ಬಲಪಡಿಸಬೇಕಿದೆ. ಭಯೋತ್ಪಾದನಾ ದಾಳಿಯ ಹಿಂದಿನ ಭಯೋತ್ಪಾದಕರು ಮತ್ತು ಪಿತೂರಿಯಲ್ಲಿ ಭಾಗಿಯಾದವರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಅವರು ಗುಡುಗಿದ್ದಾರೆ.

ಭಾರತೀಯರ ಜೊತೆ ಇಡೀ ಜಗತ್ತೇ ನಿಂತಿದೆ..

ಕಾಶ್ಮೀರದ ಪ್ರಗತಿಯಿಂದ ಕೆಲವು ಶತ್ರುಗಳಿಗೆ ಸಂತೋಷವಾಗಿಲ್ಲ. ಏಪ್ರಿಲ್‌ 22 ರಂದು ಪಹಲ್ಗಾಮ್‌‍ನಲ್ಲಿ ನಡೆದ ಭಯೋತ್ಪಾದಕ ಘಟನೆಯು ದೇಶದ ಪ್ರತಿಯೊಬ್ಬ ನಾಗರಿಕನನ್ನು ದುಃಖಿತನನ್ನಾಗಿ ಮಾಡಿದೆ. ಈ ಭಯೋತ್ಪಾದಕ ದಾಳಿಯ ಚಿತ್ರಗಳನ್ನು ನೋಡಿದ ನಂತರ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ನನಗೆ ತಿಳಿದಿದೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ 140 ಕೋಟಿ ಭಾರತೀಯರ ಜೊತೆಗೆ ಇಡೀ ಜಗತ್ತು ನಿಂತಿದೆ. ಭಾರತವು ದಾಳಿಯ ವಿರುದ್ಧ ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ.

ಈ ಏಕತೆಯು ಭಯೋತ್ಪಾದನೆಯ ವಿರುದ್ಧದ ನಿರ್ಣಾಯಕ ಯುದ್ಧದ ಅತಿದೊಡ್ಡ ಆಧಾರವಾಗಿದೆ. ಕಾಶ್ಮೀರದಲ್ಲಿ ಶಾಂತಿ ಮರಳುತ್ತಿದ್ದ ಸಮಯದಲ್ಲಿ, ಶಾಲಾ ಕಾಲೇಜುಗಳಲ್ಲಿ ಹುರುಪು ತುಂಬಿತ್ತು, ಕಟ್ಟಡಗಳ ನಿರ್ಮಾಣ ಕಾರ್ಯಗಳು ಹೆಚ್ಚಿನ ವೇಗವನ್ನು ಪಡೆದುಕೊಂಡಿದ್ದವು, ಪ್ರಜಾಪ್ರಭುತ್ವ ಗಟ್ಟಿಯಾಗುತ್ತಿತ್ತು. ಪ್ರವಾಸಿಗರ ಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿತ್ತು. ಜನರ ಆದಾಯ ಹೆಚ್ಚುತ್ತಿತ್ತು. ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿದ್ದವು. ಆದರೆ ನಮ್ಮ ಏಳ್ಗೆಯನ್ನು ಸಹಿಸದೆ ಹೊಟ್ಟೆ ಕಿಚ್ಚಿನಿಂದ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಮೋದಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

9 ಉಗ್ರರ ಮನೆಗಳು ಢಮಾರ್..!

ಪಹಲ್ಗಾಮ್ ದಾಳಿಯ ನಂತರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಭಾಗವಾಗಿ, ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಇನ್ನೂ ಮೂವರು ಸಕ್ರಿಯ ಭಯೋತ್ಪಾದಕರ ಮನೆಗಳನ್ನು ನೆಲಸಮ ಮಾಡಿದ್ದಾರೆ. ಇದರೊಂದಿಗೆ, ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲಿನಲ್ಲಿ ಏಪ್ರಿಲ್ 22 ರಂದು ನಡೆದ ದಾಳಿಯ ನಂತರ ಇಲ್ಲಿಯವರೆಗೆ ಶಂಕಿತ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿರುವ ಒಂಬತ್ತು ಉಗ್ರರ ಮನೆಗಳನ್ನು ಧ್ವಂಸಗೊಳಿಸಲಾಗಿದೆ.

ಅಖಾಡಕ್ಕಿಳಿದ ಎನ್‌ಐಎ..

ಭದ್ರತಾ ಪಡೆಗಳು ಕೇವಲ ಐದು ದಿನಗಳಲ್ಲಿ ಕಣಿವೆಯ 500 ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಿ ನೂರಾರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ತೆಕ್ಕೆಗೆ ವಹಿಸಿದ್ದು, ಭಾನುವಾರ ಜಮ್ಮುವಿನಲ್ಲಿ ಈ ಕುರಿತು ಪ್ರಕರಣ ದಾಖಲಿಸಿದೆ. ಭಯೋತ್ಪಾದಕ ಪಿತೂರಿಯನ್ನು ಬಹಿರಂಗಪಡಿಸಲು ಸಂಸ್ಥೆಯ ಹಲವಾರು ತಂಡಗಳು ಸಾಕ್ಷ್ಯಗಳನ್ನು ಕಲೆಹಾಕುವುದಕ್ಕಾಗಿ ಮೃತರ ಸಂತ್ರಸ್ತ ಕುಟುಂಬ ಸದಸ್ಯರು ಸೇರಿದಂತೆ ಪ್ರತ್ಯಕ್ಷದರ್ಶಿಗಳಿಂದ ಹೆಚ್ಚಿನ ಮಾಹಿತಿ ಪಡೆಯುವ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತಕ್ಕೆ ಬಂದವರೆಷ್ಟು..? ಇಲ್ಲಿಂದ ಹೋದವರೆಷ್ಟು..?

12 ವಿಭಾಗಗಳಲ್ಲಿ ಅಲ್ಪಾವಧಿಯ ವೀಸಾ ಹೊಂದಿರುವ ಪಾಕಿಸ್ತಾನಿಗಳು ಭಾರತವನ್ನು ತೊರೆಯಲು ಭಾನುವಾರ ಕೊನೆಯ ದಿನವಾಗಿತ್ತು. ಹೀಗಾಗಿ ಅಟ್ಟಾರಿ-ವಾಘಾ ಗಡಿ ದಾಟುವುದಕ್ಕಾಗಿ ವಾಹನಗಳ ದೀರ್ಘ ಸರತಿ ಸಾಲು ಕಂಡುಬಂದಿತ್ತು. ಸರ್ಕಾರವು ಹಿಂದಿನ ದಿನ ವೀಸಾ ರದ್ದತಿಯನ್ನು ಘೋಷಿಸಿದ ನಂತರ ಏಪ್ರಿಲ್ 24 ರಿಂದ ಒಂಬತ್ತು ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ 537 ಪಾಕಿಸ್ತಾನಿ ಪ್ರಜೆಗಳು ಗಡಿಯಿಂದ ನಾಲ್ಕು ದಿನಗಳಲ್ಲಿ ಭಾರತವನ್ನು ತೊರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ 14 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ ಒಟ್ಟು 850 ಭಾರತೀಯರು ಪಾಕಿಸ್ತಾನದಿಂದ ಪಂಜಾಬ್‌ನಲ್ಲಿರುವ ಕ್ರಾಸಿಂಗ್ ಮೂಲಕ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Latest Posts

Don't Miss