ಕರೂರಿನಲ್ಲಿ ಟಿವಿಕೆ ಪಕ್ಷದ ಅಧ್ಯಕ್ಷ ಹಾಗೂ ನಟ ದಳಪತಿ ವಿಜಯ್ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ಉಂಟಾದ ಭೀಕರ ಕಾಲ್ತುಳಿತದಲ್ಲಿ 39 ಮಂದಿ ಸಾವಿಗೀಡಾಗಿದ್ದಾರೆ. 95ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ DMK ಸರ್ಕಾರದ ಮೇಲೆ AIADMK ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ತೀವ್ರ ಆರೋಪ ಮಾಡಿದ್ದಾರೆ.
ಸರ್ಕಾರ ನಿರ್ಲಕ್ಷ್ಯವಿಲ್ಲದೆ ಭದ್ರತೆ ಒದಗಿಸಿದ್ದರೆ ಈ ದುರಂತ ತಪ್ಪಿಸಬಹುದಾಗಿತ್ತು ಎಂದು ಪಳನಿಸ್ವಾಮಿ ತಿಳಿಸಿದ್ದಾರೆ. ಭಾನುವಾರ ಕರೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನ ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಪಳನಿಸ್ವಾಮಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಸಾರ್ವಜನಿಕ ಕಾರ್ಯಕ್ರಮಗಳಿಗೆ ತಾರತಮ್ಯ ಭದ್ರತೆ ನೀಡಲಾಗುತ್ತಿದೆ ಎಂದು ಕಿಡಿಕಾರಿದರು. ನಮ್ಮ AIADMK ಸಭೆಗಳಲ್ಲಿ ಸರಿಯಾದ ಭದ್ರತೆ ನೀಡಲಾಗುತ್ತಿಲ್ಲ. ಆದರೆ DMK ಸಭೆಗಳಿಗೆ ಸಾವಿರಾರು ಪೊಲೀಸರನ್ನು ನಿಯೋಜಿಸುತ್ತಾರೆ. ಇದು ಪಕ್ಷಪಾತ ಸ್ಪಷ್ಟಪಡಿಸುತ್ತದೆ. ರಾಜಕೀಯ ನಿಷ್ಠೆಯಿಂದ ದೂರವಿರಬೇಕು ಎಂದು ಹೇಳಿದ್ದಾರೆ.
ಪಳನಿಸ್ವಾಮಿ ಅವರು ಈ ವೇಳೆ ಕಾಲ್ತುಳಿತದ ಕಾರಣವನ್ನ ಬಿಚ್ಚಿಟ್ಟಿದ್ದಾರೆ. ವಿದ್ಯುತ್ ಕರೆಂಟ್ನಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ನಮಗೆ ತಿಳಿಸಲಾಯಿತು. ವಿದ್ಯುತ್ ಸ್ಪಾರ್ಕ್ನಿಂದ ಜನರು ಪ್ಯಾನಿಕ್ ಆಗಿ ಓಡೋಕೆ ಶುರು ಮಾಡಿದಾಗ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ. ಈ ಹಿಂದೆ ನಾಲ್ಕು ಜಿಲ್ಲೆಗಳಲ್ಲಿ ಈ ರೀತಿ ಅಭಿಯಾನಗಳು ನಡೆದಿದ್ದರೂ ಯಾವುದೇ ಅವಘಡಗಳು ಆಗಿರಲಿಲ್ಲ. ಆದರೆ ಈ ಕರೂರ್ ರ್ಯಾಲಿ ಸಂದರ್ಭದಲ್ಲಿ ಭದ್ರತೆ ಕಳಪೆಯಾಗಿತ್ತು ಅಂತ ಕಿಡಿ ಕಾರಿದ್ದಾರೆ.
ವರದಿ : ಲಾವಣ್ಯ ಅನಿಗೋಳ