KSRTC, BMTC ನೌಕರರ ಮುಷ್ಕರದ ಬಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ತಟ್ಟಿದೆ. ರಾಜ್ಯ ಸರ್ಕಾರದ ಈ ನಿಲುವಿಗೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಬೆಂಗಳೂರಿನ ಮೆಜೆಸ್ಟ್ನಲ್ಲಿ ಬಸ್ಗಳ ಸಂಚಾರ ಕ್ರಮೇಣ ಕಡಿಮೆಯಾಗುತ್ತಿದೆ. ದುಬೈನಿಂದ ಬಂದ ವ್ಯಕ್ತಿಯೊಬ್ರು, ಮಂಗಳೂರಿಗೆ ಹೋಗಬೇಕಿತ್ತು. ಸರ್ಕಾರಿ ಬಸ್ಗಳಿಲ್ಲದ್ದಕ್ಕೆ, 12 ಸಾವಿರ ಕೊಟ್ಟು ಬಾಡಿಗೆ ಕಾರು ಮಾಡಿಕೊಂಡು ತೆರಳಬೇಕಾಯ್ತು.
ಕೊಪ್ಪಳ, ಕೋಲಾರದಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಬಸ್ ಗಾಜು ಪುಡಿ, ಪುಡಿಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಹುಬ್ಬಳ್ಳಿಯಲ್ಲಿ ಸಾರಿಗೆ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿವಿಷನ್ ಕಂಟ್ರೋಲ್ ಪ್ರಕಾರ, ಹುಬ್ಬಳ್ಳಿ ಗ್ರಾಮಾಂತರ ಭಾಗದಲ್ಲಿ, 164ರಲ್ಲಿ 120 ಬಸ್ಗಳು ಮಾತ್ರ ಕಾರ್ಯಾಚರಣೆ ನಡೆಸ್ತಿವೆ. ಹುಬ್ಬಳ್ಳಿ ಸಿಟಿಯಲ್ಲಿ 298ರಲ್ಲಿ 48 ಬಸ್ಗಳು, ಧಾರವಾಡದಲ್ಲಿ 87ಕ್ಕೆ ಬದಲಾಗಿ 37 ಬಸ್ಗಳು ಓಡಾಡ್ತಿವೆ.
ಅಧಿಕಾರಿಗಳ ಮನವಿಗೆ ಕೆಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಮುಂಜಾಗ್ರತೆಯಾಗಿ ಸಂಚಾರ ಆರಂಭಿಸಿದ ಬಸ್ಗಳಿಗೆ, ಎಸ್ಕಾರ್ಟ್ ಭದ್ರತೆ ನೀಡಲಾಗ್ತಿದೆ. ಕಾಂಗ್ರೆಸ್ ಸರ್ಕಾರ 5 ಭಾಗ್ಯಗಳ ಜೊತೆಗೆ ಎಸ್ಕಾರ್ಟ್ ಭಾಗ್ಯವನ್ನೂ ಕೊಟ್ಟಿದೆ ಅಂತಾ, ಪ್ರಯಾಣಿಕರು ವ್ಯಂಗ್ಯವಾಡ್ತಿದ್ದಾರೆ. ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿರೋದ್ರಿಂದ, ಆರ್ಟಿಒ ಅಧಿಕಾರಿಗಳು ಫೀಲ್ಡ್ಗೆ ಇಳಿದಿದ್ರು. ಹುಬ್ಬಳ್ಳಿ ನಗರದ ಎಲ್ಲಾ ನಿಲ್ದಾಣಗಳನ್ನು ಪರಿಶೀಲನೆ ನಡೆಸಿದ್ರು.
ಶಿವಮೊಗ್ಗದಲ್ಲಿ ಲಾಂಗ್ ರೂಟ್ ಬಸ್ಗಳು ಓಡಾಡ್ತಿಲ್ಲ, ನಿಗಮದ ಮಾಹಿತಿ ಪ್ರಕಾರ 17 ಬಸ್ಸುಗಳ ಅಂತರ್ ಜಿಲ್ಲಾ ಪ್ರಯಾಣ ನಿಲ್ಲಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಒಂದೇ ಒಂದು ಸರ್ಕಾರಿ ಬಸ್ ಕಾರ್ಯಾಚರಣೆ ನಡೆಸ್ತಿಲ್ಲ. ಹೀಗಾಗಿ ರೈಲಿನತ್ತ ಪ್ರಯಾಣಿಕರು ಮುಗಿಬಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಮತ್ತು ಆಟೋ ಚಾಲಕರು, ದುಪ್ಪಟ್ಟು ಹಣ ವಸೂಲಿ ಮಾಡ್ತಿದ್ದಾರೆ. ಬಸ್ ನಿಲ್ದಾಣದಿಂದ ರೈಲ್ವೇ ನಿಲ್ದಾಣದವರೆಗಿನ 4 ಕಿಲೋ ಮೀಟರ್ ಆಟೋ ಪ್ರಯಾಣಕ್ಕೆ, 150 ರೂಪಾಯಿ ಚಾರ್ಜ್ ಮಾಡ್ತಿದ್ದಾರೆ.
ಧಾರವಾಡ, ಹಾವೇರಿಯಲ್ಲೂ ಬಸ್ ಕಡಿಮೆ ಇದ್ದ ಕಾರಣ, ಇರೋ ಬಸ್ಸುಗಳೇ ಫುಲ್ ರಶ್ ಆಗಿವೆ. ಬಾಗಲಕೋಟೆಯ ಕೇಂದ್ರ ಬಸ್ ನಿಲ್ದಾಣದಿಂದ, ಪ್ರತಿ ದಿನ 500ರಿಂದ 600 ಬಸ್ಗಳು ಸಂಚಾರ ನಡೆಸ್ತಿದ್ವು. ಈಗ ಯಾವುದೇ ಬಸ್ ಸಂಚಾರವಿಲ್ಲ. ಗ್ರಾಮೀಣ ಭಾಗದ ಶಾಲಾ ಮಕ್ಕಳ ಅನುಕೂಲಕ್ಕಾಗಿ, ಕೇವಲ 2 ಬಸ್ಗಳ ಸಂಚಾರ ಕಲ್ಪಿಸಲಾಗಿದೆ. ಸೊಕ್ಕನಾರಿ ಭಾಗಕ್ಕೆ ಪೊಲೀಸ್ ಭದ್ರತೆಯೊಂದಿಗೆ ಬಸ್ ಓಡಾಡ್ತಿವೆ. ಬೇರೆ ಊರುಗಳಿಂದ ಬಂದಿರುವ ಜನರು, ಖಾಸಗಿ, ಆಟೋಗಳ ಮೊರೆ ಹೋಗ್ತಿದ್ದಾರೆ.
ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಬಂದವರು, ಮಧ್ಯಾಹ್ನವಾದ್ರೂ ಬಸ್ ನಿಲ್ದಾಣದಲ್ಲೇ ಇದ್ದಾರೆ. ಮುಷ್ಕರದ ವಿಚಾರ ನಮಗೇ ಗೊತ್ತೇ ಇಲ್ಲ ಅಂತಾ, ಹಳ್ಳಿಗರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಮಕ್ಕಳನ್ನು ಕೈಯ್ಯಲ್ಲಿಡಿದು ಕುಳಿತ ಪ್ರಯಾಣಿಕರು, ಕಣ್ಣೀರಾಕುತ್ತಿದ್ದಾರೆ.
ಮೈಸೂರಿನಲ್ಲಿ ಸಂಪೂರ್ಣವಾಗಿ ಖಾಸಗಿ ಬಸ್ಗಳ ಸಂಚಾರ ಆರಂಭವಾಗಿದೆ. ಹಾಸನದ ಶಾಲಾ-ಕಾಲೇಜುಗಳಲ್ಲಿ ಸ್ವಯಂಪ್ರೇರಿತವಾಗಿ ವಿದ್ಯಾರ್ಥಿಗಳು, ಶಾಲಾ-ಕಾಲೇಜುಗಳಿಗೇ ಬಂದಿಲ್ಲ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಡಿಪೋದಲ್ಲಿ ಬಸ್ಸುಗಳು ನಿಂತಿವೆ. ಪರಿಣಾಮ, ನಿಲ್ದಾಣದಲ್ಲಿ ಪ್ರಯಾಣಿಕರು ಗೋಳಾಡುವಂತಾಗಿದೆ. ಇನ್ನು, ರಾಯಚೂರಿನಲ್ಲಿ ವಿದ್ಯಾರ್ಥಿಗಳು, ಟಂಟಂ ವಾಹನಗಳ ಮೊರೆ ಹೋಗಿದ್ದಾರೆ.
ಒಟ್ನಲ್ಲಿ ಸಾರಿಗೆ ನೌಕರರು, ರಾಜ್ಯ ಸರ್ಕಾರ ನಡುವಿನ ಜಟಾಪಟಿಯಿಂದಾಗಿ, ಪ್ರಯಾಣಿಕರು ಒಂದೇ ದಿನಕ್ಕೆ ಹೈರಾಣಾಗಿದ್ದಾರೆ.