ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾಗೌಡ ಸೇರಿದಂತೆ ಹದಿನೇಳು ಮಂದಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಪ್ರಕರಣದಿಂದಾಗಿ ಕಳೆದ ಎರಡು ತಿಂಗಳಿಗೂ ಹೆಚ್ಚು ದಿನಗಳನ್ನು ಈ ಎಲ್ಲಾ ಆರೋಪಿಗಳು ಜೈಲಿನಲ್ಲೇ ಇದ್ದಾರೆ. ದಿನ ದಿನಕ್ಕೂ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಎ1 ಆರೋಪಿಯಾಗಿ ಇಷ್ಟು ದಿನಗಳ ಕಾಲ ಜೈಲಿನಲ್ಲಿದ್ದ ಪವಿತ್ರಾಗೌಡ, ದರ್ಶನ್ ಅವರಿಗೂ ಮೊದಲೇ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಜಾಮೀನು ನಿರಾಕರಿಸಿ, ಅರ್ಜಿಯನ್ನು ಮುಂದೂಡಿದೆ.
ಹಾಗಾದರೆ, ಪವಿತ್ರಾಗೌಡ ಜಾಮೀನು ಕೋರಿಕೆ ವೇಳೆ ಅವರ ಪರ ವಕೀಲರು ಹೇಳಿದ್ದಿಷ್ಟು. ” ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದರಿಂದ ನಾನು ಗಮನಕ್ಕೆ ತಂದಿದ್ದೆ ಅಷ್ಟೇ. ಸಾಮಾನ್ಯವಾಗಿ ಮಹಿಳಾ ಆರೋಪಿಗೆ ವಿನಾಯಿತಿ ಇರುತ್ತೆ. ಇದು ಗಂಭೀರ ಪ್ರಕರಣವಾಗಿದ್ದರೂ, ಜಾಮೀನು ನೀಡಲು ಅವಕಾಶವಿದೆ. ಯಾವ ಮಹಿಳೆ ಇದ್ದಿದ್ದರೂ ಕೂಡ ಮೆಸೇಜ್ ಬಂದಿದ್ದನ್ನು ಗಮನಕ್ಕೆ ತಂದೇ ತರುತ್ತಿದ್ದರು. ನಾನು ಎರಡು ತಿಂಗಳಿನಿಂದಲೂ ಎಲ್ಲಾ ತನಿಖೆಗೆ ಸಹಕರಿಸಿದ್ದೇನೆ. ಸದ್ಯ ನನ್ನ ಆರೋಗ್ಯದಲ್ಲಿ ಸಮಸ್ಯೆ ಇದೆ. ಮಾನಸಿಕವಾಗಿ ತುಂಬಾ ಕುಗ್ಗಿದ್ದೇನೆ. ಏನೋ ಆಚಾತುರ್ಯ ನಡೆದು ಹೋಗಿದೆ. ಹಾಗಾಗಿ ಜಾಮೀನು ನೀಡಬೇಕು” ಎಂಬುದಾಗಿ ಮನವಿ ಮಾಡಿದ್ದಾರೆ.
ಆದರೆ, ಪೊಲೀಸರು ಅದನ್ನು ಆಕ್ಷೇಪಿಸಿದ್ದಾರೆ. ಹೊರಗೆ ಬಂದರೆ ಸಾಕ್ಷಿ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆರೋಪಿಗಳು ಸಾಕ್ಷಿಗಳನ್ನು ನಾಶ ಮಾಡಬಹುದು. ಯಾವುದೇ ಕಾರಣಕ್ಕೂ ಜಾಮೀನು ಕೊಡಬಾರದು. ಇನ್ನೂ ಒಂದಷ್ಟು ಸಾಕ್ಷಿಗಳನ್ನು ಕಲೆಹಾಕುವುದಿದೆ. ಇದರಿಂದಾಗಿ ಜಾಮೀನು ನೀಡಬಾರದು ಎಂದು ವಾದಿಸಿದ್ದಾರೆ.