ಮಾರಣಾಂತಿಕ ಕೊರೋನಾ ಕಾಯಿಲೆಯು ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಬಂದು ಹೋಗುವವರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರ ಭೇಟಿಯನ್ನು ಇಂದಿನಿಂದ ಕೆಲವು ದಿನಗಳ ಕಾಲ ಮುಂದೂಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ತಿಳುವಳಿಕೆ ಪ್ರಕಾರ ಕರೋನಾ ಕಾಯಿಲೆಯು ದೈಹಿಕ ಸ್ಪರ್ಶ ಹಾಗೂ ಪರಸ್ಪರ ಉಸಿರಾಟದ ಸೋಂಕಿನಿಂದ ಅತಿ ವೇಗವಾಗಿ ಹರಡುತ್ತಿದೆ. ಕೇಂದ್ರ ಹಾಗೂ ರಾಜ್ಯದ ಆಡಳಿತರೂಢ ಸರ್ಕಾರಗಳು ಈ ಕುರಿತು ಕೆಲವು ಸೂಚನೆಗಳನ್ನು ನೀಡಿವೆ.
ಈ ಎಲ್ಲದರ ಹಿನ್ನೆಲೆಯಲ್ಲಿ ತಮ್ಮ ಸದಾಶಿವನಗರ ನಿವಾಸದಲ್ಲಾಗಲಿ ಅಥವಾ ಕೆಪಿಸಿಸಿ ಕಚೇರಿಯಲ್ಲಾಗಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಭೇಟಿ ಮುಂದೂಡಿರುವುದಾಗಿ ಡಿಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರೋನಾ ಸೋಂಕು ನಿಯಂತ್ರಣಕ್ಕೆ ಬಂದ ನಂತರ ಭೇಟಿ ಕಾರ್ಯಕ್ರಮ ಮುಂದುವರಿಯುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ತಾವು ತೆಗೆದುಕೊಂಡಿರುವ ಈ ಕ್ರಮವನ್ನು ಯಾರೂ ತಪ್ಪಾಗಿ ಭಾವಿಸಬಾರದು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.