Hubli News: ಹುಬ್ಬಳ್ಳಿ; ವಾಲ್ಮೀಕಿ ಹಗರಣದಲ್ಲಿ ಸರ್ಕಾರ ದೊಡ್ಡ ಯಡವಟ್ಟು ಮಾಡಿದೆ. ಸಿಎಂ ಸಿದ್ಧರಾಮಯ್ಯನವರೇ ನಾಗೇಂದ್ರ ಅವರ ಹಾಗೂ ಇನ್ನಿತರ ಶಾಸಕರನ್ನು ಮರೆಮಾಚುವ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಯು ಕೂಡ ಸರ್ಕಾರದ ಅಡಿಯಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುವುದೇ ಅರ್ಥವಾಗದಂತ ಸ್ಥಿತಿಯನ್ನು ತಲುಪಿದೆ ಎಂದು ರಾಜ್ಯ ಸರ್ಕಾರದ ನಡೆಯ ವಿರುದ್ಧ ಶಾಸಕ ಮಹೇಶ ಟೆಂಗಿನಕಾಯಿ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಹೇಳಿದ್ದರು ಕ್ಲೀನ್ ಚೀಟ್ ಆಗುತ್ತೇ ಅಂತ. ಆದರೇ ಈಗ ವಾಲ್ಮೀಕಿ ಹಗರಣದ ಚಾರ್ಜ್ ಶೀಟ್ ನಲ್ಲಿ ನಾಗೇಂದ್ರ ಅವರು ಹಾಗೂ ನಿಗಮದ ಅಧ್ಯಕ್ಷರು ಸಮಬಾಳು ಸಮಪಾಲು ತೆಗೆದುಕೊಂಡಿದ್ದಾರೆ ಎಂಬುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಹಗರಣದಲ್ಲಿ ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಸಂಪೂರ್ಣ ಭಾಗಿಯಾಗಿದೆ. ಈ ಬಗ್ಗೆ ತನಿಖೆಯಿಂದ ಸತ್ಯಾಸತ್ಯತೆ ಬಯಲಾಗುತ್ತದೆ. ಸಿಎಂ ಸಿದ್ಧರಾಮಯ್ಯನವರು, ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ಕ್ಲೀನ್ ಹ್ಯಾಂಡ್ ಎಂದು ಹೇಳಿಕೊಂಡವರ ಬಂಡವಾಳ ಕೂಡ ಬಯಲಾಗುತ್ತದೆ ಎಂದರು.
ಬಿಜೆಪಿ ಹಗರಣದ ತನಿಖೆಗೆ ಐದು ಜನರ ತಂಡ ರಚನೆಯ ಬಗ್ಗೆ ಮಾತನಾಡಿದ ಅವರು, ಐದು ಜನರಲ್ಲ ಐವತ್ತು ಜನರನ್ನು ಮಾಡಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಒಂದು ವರ್ಷ ಏನು ಮಾಡ್ತಿದ್ದೀರಿ..? ನಿಮ್ಮ ಪಾದದ ಬುಡಕ್ಕೆ ನೀರು ಬಂದಾಗ ಮತ್ತೊಬ್ಬರ ಪಾದದ ಬುಡಕ್ಕೆ ನೀರು ಹಾಕುವ ಕಾರ್ಯಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೊಮ್ಮೆ ದೇಶದ್ರೋಹಿ ಘಟನೆಗಳು ನಡೆಯುತ್ತವೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸದೃಢ ನಾಯಕತ್ವ ಇರುವ ಕಾರಣಕ್ಕೆ ಈಗ ದೇಶ ಭದ್ರವಾಗಿದೆ ಎಂದು ಅವರು ಹೇಳಿದರು.