ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಭಾರೀ ವಿವಾದಕ್ಕೆ ಕಾರಣವಾಗಿದೆ. 74 ಲಕ್ಷ ಮತದಾರರು ಎಲ್ಲಿದ್ದಾರೆ? ಅವರ ಗುರುತಿನ ಚೀಟಿ, ದಾಖಲೆ ನೀಡುವಂತೆ ಚುನಾವಣಾ ಆಯೋಗ ಕೋರಿದೆ. ಈ ಸಂಬಂಧ ವಿವಿಧ ಪಕ್ಷಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಇದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವ ಆಯೋಗ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಮತದಾರರ ಪಟ್ಟಿಯ ಎಸ್ಐಆರ್ಗೆ ಮಾನ್ಯ ದಾಖಲೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ದಾಖಲೆಗಳನ್ನು ಮಾನ್ಯ ದಾಖಲೆಗಳು ಎಂದು ಪರಿಗಣಿಸಬೇಕು ಎಂದು ಕಳೆದ ವಾರ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ಇವುಗಳನ್ನು ಸೂಕ್ತ ದಾಖಲೆಗಳು ಎಂದು ಪರಿಗಣಿಸಲು ಆಗುವುದಿಲ್ಲ ಎಂದು ತಿಳಿಸಿದೆ. ಆಧಾರ್ ಕಾರ್ಡ್ ಕೇವಲ ಗುರುತಿನ ಪುರಾವೆಯಾಗಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಅಸ್ತಿತ್ವದಲ್ಲಿರುವ ಮತದಾರರ ಕಾರ್ಡ್ಗಳನ್ನು ಅವಲಂಬಿಸುವುದರಿಂದ ಈ ವಿಶೇಷ ಅಭಿಯಾನವೇ ವ್ಯರ್ಥವಾಗುತ್ತದೆ ಎಂದು ಪ್ರತಿಪಾದಿಸಿದೆ. ಆದರೆ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯ ಪೌರತ್ವ ಕೊನೆಗೊಳ್ಳುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ಮಂದುವರೆದಂತೆ ಚುನಾವಣಾ ಆಯೋಗ ಸೋಮವಾರ ಸಂಜೆ ಸುಪ್ರೀಂ ಕೋರ್ಟ್ಗೆ ಬೃಹತ್ ಅಫಿಡವಿಟ್ ಸಲ್ಲಿಸಿದೆ. ಎಸ್ಐಆರ್ನಿಂದ ಮತದಾರರ ಯಾವುದೇ ಕಾನೂನು ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದೆ. ಅಲ್ಲದೆ 11 ವಿರೋಧ ಪಕ್ಷಗಳು, NGOಗಳು ಮತ್ತು ಬಿಹಾರದ ಕೆಲವು ನಿವಾಸಿಗಳು ಎಸ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಹಾಗೂ ಡಿಸೆಂಬರ್ನಲ್ಲಿ ಪರಿಷ್ಕರಿಸಲಾದ ಹಿಂದಿನ ಮತದಾರರ ಪಟ್ಟಿಗಳನ್ನೇ ಆಧಾರವಾಗಿ ಇಟ್ಟುಕೊಂಡು ನವೆಂಬರ್ ವಿಧಾನಸಭಾ ಚುನಾವಣೆ ನಡೆಸಬೇಕು ಎಂದು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯವನ್ನು ಕೋರಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ