ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಯಾರು ಆವೇಶಕ್ಕೆ ಒಳಗಾಗದಂತೆ ಸಿಎಂ ಬೊಮ್ಮಾಯಿ ಮನವಿ

ಬೆಂಗಳೂರು: ಪ್ರವೀಣ್ ನೆಟ್ಟಾರು ಅವರ ಹತ್ಯೆ ಬಗ್ಗೆ ಯಾರು ಆವೇಶಕ್ಕೆ ಒಳಗಾಗಬೇಡಿ. ಹತ್ಯೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳೋದಕ್ಕೆ ಆದೇಶಿಸಿದ್ದೇನೆ. ಕಾರ್ಯಾಚರಣೆ ನಡೆಯುತ್ತಿದೆ. ಡಿಜಿ ಅವರ ಬಳಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಶೀಘ್ರವೇ ಕೊಲೆ ಮಾಡಿದವರನ್ನು ಬಂಧಿಸಿ, ಉಗ್ರ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದ ಆರ್.ಟಿ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯಾರು ಆವೇಶ ಗೊಳ್ಳಬೇಡಿ. ಪ್ರವೀಣ್ ಹತ್ಯೆ ಬಗ್ಗೆ ಕ್ರಮ ಕೈಗೊಳ್ಲೋಕೆ ಆದೇಶಿಸಿದ್ದೇನೆ. ಕಾರ್ಯಾಚರಣೆ ನಡೀತಿದೆ. ಡಿಜಿ‌ ಅವರ‌ ಬಳಿ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಶೀಘ್ರವೇ ಕೊಲೆ‌ ಮಾಡಿದವರನ್ನ ಬಂಧಿಸಿ‌ ಉಗ್ರ ಶಿಕ್ಷೆಗೆ ಒಳಪಡಿಸುತ್ತೇವೆ. ಘಟನೆ ಹಿಂದೆ ಯಾರೇ‌ ಇದ್ದರೂ ಬಂಧಿಸುತ್ತೇವೆ. ಆವೇಶಕ್ಕೆ ಯಾರೂ ಒಳಗಾಗಬಾರದು. ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದರು.

ಮಂಗಳೂರು ಎಸ್ಪಿ ಕಾಸರಗೋಡು ಎಸ್ಪಿ ಜೊತೆ ಮಾತಾಡಿದ್ದಾರೆ. ರಾಜ್ಯದ ಡಿಜಿಪಿ ಕೇರಳ ಡಿಜಿಪಿ ಜೊತೆ ಮಾತನಾಡಿದ್ದಾರೆ. ಆರೋಪಿ ಬೆನ್ನತ್ತಿರುವ ತಂಡದ ಜೊತೆ ಡಿಜಿಪಿ ನಿರಂತರ ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ಕೊಲೆಗಡುಕರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸುತ್ತೇವೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ಇದರ ಹಿಂದೆ ಇರುವ ವ್ಯಕ್ತಿಗಳು ಹಾಗೂ ಸಂಘಟನೆಗಳು ಯಾರೇ ಇದ್ರು,ಅವರನ್ನು ಸದೆಬಡಿಯುವ ಕೆಲಸ ಮಾಡ್ತೀವಿ ಎಂದರು.

ಸಮಾಜದಲ್ಲಿ ಹಿಂಸೆ ಮಾಡಿ ದುಷ್ಕೃತ್ಯ ಎಸಗುವವರನ್ನು ದಮನ ಮಾಡುವವರೆಗೂ ನಾನು ವಿಶ್ರಮಿಸುವುದಿಲ್ಲ. ಯಾರು ಆವೇಶಕ್ಕೆ ಒಳಗಾಗದೇ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಯಾರು ಪ್ರಚೋದನಕಾರಿ ಹೇಳಿಕೆ ಕೊಡದೆ, ತನಿಖೆಗೆ ಎಲ್ಲರು ಸಹಕಾರ ಕೊಡಬೇಕು ಎಂದರು.

ಇದೇ ವೇಳೆ ಪ್ರಕರಣವನ್ನು ಎನ್ ಐಎಗೆ ಕೊಡುವ ವಿಚಾರವಾಗಿ ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿ ಇದ್ರೆ, ಪ್ರಾಥಮಿಕ ತನಿಖೆ ಆಧಾರಿಸಿ, ಮುಂದೆ ಎನ್ಐಎ ಬಗ್ಗೆ ತೀರ್ಮಾನ ಮಾಡ್ತೀವಿ ಎಂದ ಸಿಎಂ ಬೊಮ್ಮಾಯಿ‌ ತಿಳಿಸಿದರು.

About The Author