ನೇಪಾಳದಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಪ್ರಧಾನಿ ಕೆ.ಪಿ ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಓಲಿ ದೇಶ ಬಿಟ್ಟು ಪಲಾಯನ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಭ್ರಷ್ಟಾಚಾರ ಆರೋಪದ ಮೇಲೆ ಕಠ್ಮಂಡುವಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ನೇಪಾಳ ಪ್ರಧಾನಿ ಕೆ.ಪಿ. ಶ ರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ.
ಈಗ ಇವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರದ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ವಿವಾದಾತ್ಮಕ ನೀತಿಗಳ ವಿರುದ್ಧ ಯುವಜನರಿಂದ ಆರಂಭವಾದ ಪ್ರತಿಭಟನೆಗಳು ದೇಶಾದ್ಯಾಂತ ಹಿಂಸಾಚಾರ ಮತ್ತು ಅಶಾಂತಿಯನ್ನು ಹುಟ್ಟುಹಾಕಿವೆ.
ಸಾವಿರಾರು ಪ್ರತಿಭಟನಾಕಾರರು ಕರ್ಫ್ಯೂ ಆದೇಶವನ್ನು ಉಲ್ಲಂಘಿಸಿ ಬೀದಿಗೆ ಬಿದ್ದಿದ್ದಾರೆ. ಭದ್ರತಾ ಪಡೆಗಳೊಂದಿಗೆ ಸಂಘರ್ಷದಲ್ಲಿ ಹಲವು ಸ್ಥಳಗಳಲ್ಲಿ ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರಗಳು ನಡೆದಿವೆ.
ರಾಜೀನಾಮೆಗಳ ನಂತರ ಕಠ್ಮಂಡುವಿನ ವಿವಿಧ ಭಾಗಗಳಲ್ಲಿ ಹಿಂಸಾಚಾರಗಳು ಇನ್ನೂ ಮುಂದುವರೆದಿದೆ.
ಓಲಿ ಅವರ ಖಾಸಗಿ ನಿವಾಸ ಸುಟ್ಟುಹೋಗಿದೆ. ಅನೇಕ ರಾಜಕೀಯ ಮುಖಂಡರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಸರ್ಕಾರದ ಮುಖ್ಯ ಕಚೇರಿ ಸಿಂಘಾ ದರ್ಬಾರ್ ಸಂಕೀರ್ಣದಲ್ಲೂ ಬೆಂಕಿ ಹೊತ್ತಿಹೋದ ಘಟನೆ ನಡೆದಿದೆ. ನೇಪಾಳದ ಸದ್ಯದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ವರದಿ : ಲಾವಣ್ಯ ಅನಿಗೋಳ




