www.karnatakatv.net : ಮುಖ್ಯ ಮಂತ್ರಿ ಯವರ ಬದಲಾವಣೆ ಚರ್ಚೆಯು ದಿನೇ ದಿನೇ ಹೆಚ್ಚಾಗುತ್ತಾಯಿದೆ ಲಿಂಗಾಯತ್ ಸಮುದಾಯದವರು ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದೆಂದು ಬಿಜೆಪಿ ಹೈಕಮಾಂಡ ಮೇಲೆ ಒತ್ತಡ ಹಾಕಿದ್ದಾರೆ. ಈ ಹಿಂದೆ ಸಿಎಂ ಯಡಿಯೂರಪ್ಪ ಅವರೇ ಕೊಟ್ಟಿದ್ದ ಭರವಸೆಯನ್ನು ಈಡೇರಿಸಬೇಕೆಂದು ಲಿಂಗಾಯತ ಪಂಚಮಸಾಲಿ ಸಮುದಾಯ ಆಗ್ರಹಿಸಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ ನಡೆದಿತ್ತು. ಆಗ ಕೂಡಲ ಸಂಗಮದಿಂದ ಬೆಂಗಳೂರಿನ ವರೆಗೆ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಪಾದಯಾತ್ರೆ ಮಾಡಿದ್ದರು. ಅದಾದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರು ತಿಂಗಳುಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವ ಭರವಸೆಯನ್ನು ಕೊಟ್ಟಿದ್ದರು. ಹೀಗಾಗಿ ಕಳೆದ ಮಾರ್ಚ್ ತಿಂಗಳಿನಲ್ಲಿ ಹೋರಾಟವನ್ನು ಕೈಬಿಡಲಾಗಿತ್ತು. “ಸಿಎಂ ಯಡಿಯೂರಪ್ಪ ಅವರು ಮಾತು ತಪ್ಪಿದಲ್ಲಿ ಆರು ತಿಂಗಳುಗಳ ನಂತರ ಸೆಪ್ಟಂಬರ್ 15ಕ್ಕೆ ಮತ್ತೆ ಸತ್ಯಾಗ್ರಹ ಶುರು ಮಾಡುತ್ತೇವೆ. ಆಗ ಸಮುದಾಯದ 20 ಲಕ್ಷ ಜನರನ್ನು ಒಟ್ಟಿಗೆ ಸೇರಿಸಿ ಬೃಹತ್ ಹೋರಾಟ ಮಾಡುತ್ತೇವೆ. ಸರ್ಕಾರ ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂಬ ಭರವಸೆಯಿದೆ” ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ ಹೇಳಿಕೆ ನೀಡಿದ್ದರು.
ಇದೀಗ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಮತ್ತೆ ಆ ಸಮುದಾಯ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕುತ್ತಿದೆ. ಒಂದೊಮ್ಮೆ ಸಿಎಂ ಬದಲಾವಣೆ ಆದಲ್ಲಿ ಮೀಸಲಾತಿ ವಿಚಾರ ನೆನೆಗುದಿಗೆ ಬೀಳುವ ಆತಂಕ ಅವರನ್ನು ಕಾಡುತ್ತಿದೆ.