‘ಪ್ರಜಾಪ್ರಭುತ್ವ ಉಳಿಸಿ, ಮತದಾನ ಹಕ್ಕು ಉಳಿಸಿ’ ಎಂಬ ಘೋಷಣೆಯಡಿ ಆಗಸ್ಟ್ 5ರಂದು ನಡೆಯಬೇಕಾಗಿದ್ದ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಮಾವೇಶ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ.
ಆಗಸ್ಟ್ 5 ರಂದು ನಡೆಯಬೇಕಿದ್ದ ಪ್ರತಿಭಟನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವ ವಹಿಸಿದ್ದರು. ಪ್ರತಿಭಟನಾ ಸ್ಥಳವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನ್ನು ಆಯ್ಕೆ ಮಾಡಲಾಗಿತ್ತು. 4000 ಅಧಿಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತಗಳ್ಳತನದ ಆಟಂ ಬಾಂಬ್ಗೆ ಸಾಕ್ಷಿ ಬಿಡುಗಡೆ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಧರಣಿಗೆ ಕಾಂಗ್ರೆಸ್ ಎಲ್ಲಿಲ್ಲದ ಬಂದೋಬಸ್ತ್ ಮಾಡಿತ್ತು. ಆದರೆ ಕೊನೆ ಕ್ಷಣದಲ್ಲಿ ಸಣ್ಣ ಬದಲಾವಣೆ ಆಗಿದೆ.
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರು ಇಂದು ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಾರ್ಖಂಡಿಗೆ ತೆರಳುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಏಕಕಾಲದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿಯನ್ನು ನೀಡಿದ್ದಾರೆ.
ಆಗಸ್ಟ್ 5ರಂದು ನಡೆಯಬೇಕಿದ್ದ ಪ್ರತಿಭಟನೆ ಈಗ ಆಗಸ್ಟ್ 8ಕ್ಕೆ ಮುಂದೂಡಲಾಗಿದೆ. ಈ ಪ್ರತಿಭಟನೆಗೆ ನಾವು ಕಾಯುತ್ತಿದ್ದೆವು. ಆದರೆ ಶಿಬು ಸೊರೇನ್ ನಿಧನದಿಂದಾಗಿ ಪಕ್ಷವು ಅಂತಿಮ ನಮನ ಸಲ್ಲಿಸಲು ನಿರ್ಧರಿಸಿದೆ.
ಇದು ತಾತ್ಕಾಲಿಕ ಮುಂದೂಡಿಕೆ ಆಗಿದ್ದು, ಪ್ರತಿಭಟನೆ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಜತೆಗೆ, ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೇನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮಹದೇವಪುರ ಕ್ಷೇತ್ರದಿಂದ ಪಾದಯಾತ್ರೆ ಮೂಲಕ ಕೇಂದ್ರ ಚುನಾವಣಾ ಅಧಿಕಾರಿಗಳ ಕಚೇರಿ ಅಥವಾ ಫ್ರೀಡಂ ಪಾರ್ಕ್ಗೆ ಸಾಗುವ ಯೋಜನೆ ಇತ್ತು. ಹೀಗಾಗಿ, ಈ ಪ್ರತಿಭಟನೆಯಲ್ಲಿಯೂ ಬಹುಮಾನ್ಯ ನಾಯಕರು ಪಾಲ್ಗೊಳ್ಳುವುದು ನಿಶ್ಚಿತವಾಗಿತ್ತು. ಪಕ್ಷದ ಎಲ್ಲಾ ಹಿರಿಯರು ಶ್ರದ್ಧಾಂಜಲಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ, ಪ್ರಜಾಪ್ರಭುತ್ವದ ಹೋರಾಟಕ್ಕೆ ಗೌರವ ವಹಿಸುವ ಸಲುವಾಗಿ ಸಮಾವೇಶ ಮುಂದೂಡಲಾಗಿದೆ ಎಂದಿದ್ದಾರೆ.