Thursday, June 19, 2025

Latest Posts

Darshan: ಜೈಲಿಂದಲೇ ಜಾಮೀನಿಗೆ ಬೇಡಿಕೆ ಇಟ್ರಾ ನಟ ದರ್ಶನ್!

- Advertisement -

ಬೆಂಗಳೂರು: ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಜೈಲು ಪಾಲಾಗಿದ್ದಾರೆ. ದರ್ಶನ್ ಜೈಲಿನಲ್ಲಿ 11 ದಿನಗಳನ್ನು ಕಳೆದಿದ್ದಾರೆ. ನಿದ್ದೆ ಬರದ ರಾತ್ರಿಗಳನ್ನು ಸುಟ್ಟಿದ್ದಾರೆ. ನೆಮ್ಮದಿ ಇರದ ಹಗಲನ್ನು ಕಳೆದಿದ್ದಾರೆ. ಅವರನ್ನು ಕಾಣಲು ಈಗಾಗಲೇ ಅವರ ಪತ್ನಿ, ಪುತ್ರ, ತಾಯಿ ಮತ್ತು ಸಹೋದರ ಹೋಗಿ ಸಮಾಧಾನ ಹೇಳಿದ್ದಾಗಿದೆ. ಯಾರು ಎಷ್ಟೇ ಸಮಾಧಾನದ ಮಾತುಗಳನ್ನು ಹೇಳಿದರೂ, ಜೈಲೊಳಗೆ ಬಂಧಿಯಾಗಿರುವ ಆ ಮನಸ್ಸಿಗಷ್ಟೇ ಗೊತ್ತು ಆ ಸಂಕಟ, ಆ ಒದ್ದಾಟ.

ಇಷ್ಟಕ್ಕೂ ದರ್ಶನ್ ಜೈಲಲ್ಲಿ ಸುಮ್ಮನೆಯಂತೂ ಕುಳಿತಿಲ್ಲ. ಅಲ್ಲಿದ್ದುಕೊಂಡೇ ಜಾಮೀನು ಪಡೆದು ಹೊರಬರುವ ಯೋಚನೆಯಲ್ಲೂ ಇದ್ದಾರೆ. ಹಾಗಾಗಿ ಅವರು ಜಾಮೀನು ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಒಂದಷ್ಟು ನಿರ್ಮಾಪಕರಿಗೆ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಜೈಲಿನಲ್ಲಿ ಫೋನ್ ಮಾಡಲು ಅವಕಾಶವಿದೆಯೇ ಈ ಪ್ರಶ್ನೆ ಕಾಡುವುದು ಸಹಜ. ಹೌದು, ವಾರಕ್ಕೆ ಮೂರು ಸಲ ಕರೆ ಮಾಡುವ ಅವಕಾಶವಿದೆ. ಆ ಮೂರು ಬಾರಿಗೂ ದರ್ಶನ್ ಅವರು ನಿರ್ಮಾಪಕರಿಗೆ ಕರೆ ಮಾಡಿದ್ದಾರೆ ಎಂಬ ಸುದ್ದಿ ಇದೆ. ಅಷ್ಟೇ ಅಲ್ಲ, ಅವರು ಜೈಲಿನಲ್ಲಿರುವ ಅಕ್ಕ-ಪಕ್ಕದ ಖೈದಿಗಳ ಲಿಮಿಟನ್ನೂ ಕೂಡ ದರ್ಶನ್ ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ದರ್ಶನ್ ಅವರಿಗೆ ವಾರಕ್ಕೆ ಮೂರು ಬಾರಿ ಫೋನ್ ಮಾಡಲು ಜೈಲು ಸಿಬ್ಬಂದಿ ಜೈಲಿನಲ್ಲಿ ಅವಕಾಶ ನೀಡಿದ್ದಾರೆ. ಜೈಲಿನ ಫೋನ್ ಬೂತ್‌ನಿಂದ ದರ್ಶನ್ ಕರೆ ಮಾಡಿರುವುದುಂಟು. ಈ ಮೂರು ಬಾರಿಯೂ ದರ್ಶನ್ ತಮ್ಮ ಕುಟುಂಬದವರಿಗ್ಯಾರಿಗೂ ಫೋನ್ ಮಾಡಿಲ್ಲ ಅನ್ನೋದು ನೆನಪಿರಲಿ. ಅವರು ಫೋನ್ ಮಾಡಿದ್ದು, ಕೆಲ ನಿರ್ಮಾಪಕರಿಗೆ ಅನ್ನೋದು ವಿಶೇಷ. ಹೌದು, ನಿರ್ಮಾಪಕರ ಜೊತೆಯಲ್ಲಿ ಅವರು ಕೆಲವು ನಿರ್ದೇಶಕರಿಗೂ ಫೋನ್ ಮಾಡಿ ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ರಾತ್ರಿ ವೇಳೆ ದರ್ಶನ್ ಅವರು ಕೆಲವು ನಿರ್ಮಾಪಕರಿಗೆ ಫೋನ್ ಮಾಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಈ ವೇಳೆ ದರ್ಶನ್ ಅವರು ಏನೇ ಇದ್ದರೂ. ಹೇಗಾದರೂ ಮಾಡಿ, ಜಾಮೀನು ವಿಚಾರಕ್ಕೆ ಗಮನಹರಿಸಬೇಕು ಆ ಮೂಲಕ ತಮ್ಮನ್ನು ಜೈಲಿನಿಂದ ಹೊರಗೆ ಕರೆತರಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಈ ವೇಳೆ ಅವರ ಫೋನ್ ಕರೆ ಅವಕಾಶ ಮುಗಿದರೂ ಸಹ ಪಕ್ಕದ ಖೈದಿಗಳಿಗೆ ಇರುವ ಫೋನ್ ಕರೆಯ ಅವಕಾಶ ಬಳಸಿಕೊಂಡು ಫೋನ್ ಮಾಡುವ ಮೂಲಕ ನಿರ್ಮಾಪಕರ ಬಳಿ ಜಾಮೀನು ವಿಷಯವನ್ನೇ ಪ್ರಸ್ತಾಪಿಸುತ್ತಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ.

ಸದ್ಯ, ಜೈಲು ಹೊರಗಿನ ಆವರಣ ಜಿಗಿ ಜಿಗಿ ಎನ್ನುತ್ತಿದೆ. ಕಾರಣ, ಡಿ ಬಾಸ್ ಫ್ಯಾನ್ಸ್ ಓಡಾಟ, ಚೀರಾಟ, ಕೂಗಾಟ. ಹೌದು, ದರ್ಶನ್ ಯಾವಾಗ ಜೈಲಿಗೆ ಹೋದರೋ, ಅಂದಿನಿಂದ ಅಭಿಮಾನಿಗಳ ಓಡಾಟ ಅಲ್ಲಿ ಹೆಚ್ಚಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಫ್ಯಾನ್ಸ್ ಬರುತ್ತಿದ್ದಾರೆ. ತನ್ನ ಡಿ ಬಾಸ್ ಅವರನ್ನು ಒಂದೊಮ್ಮೆ ಕಣ್ತುಂಬಿಕೊಳ್ಳಬೇಕು ಅಂತ ತುದಿಗಾಲ ಮೇಲೆ ನಿಂತಿರುವುದಂತೂ ಸುಳ್ಳಲ್ಲ ಬಿಡಿ.

ಅದೇನೆ ಇರಲಿ, ರಾಜ್ಯಾದ್ಯಂತ ಜೋರು ಸುದ್ದಿ ಮಾಡುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ ಇದೀಗ ಹೊಸ ಟ್ವಿಸ್ರ್ಟ ಪಡೆದುಕೊಳ್ಳುತ್ತಲೇ ಇದೆ. ಇದುವರೆಗೂ ರೇಣುಕಾಸ್ವಾಮಿ ಅವರನ್ನ ಅಮಾಯಕ ಎನ್ನಲಾಗುತ್​ತಿದ್ದ ಸುದ್ದಿ, ಮೆಲ್ಲನೆ ರೇಣುಕಾಸ್ವಾಮಿ ಅವರ ಮೇಲೂ ಒಂದಷ್ಟು ಆರೋಪಗಳು ಕೇಳಿ ಬರುವಂತಾಗಿದೆ. ಪವಿತ್ರಾ ಗೌಡ ಅವರಿಗೆ ಫೇಕ್ ಐಡಿಯಿಂದ ಹೋದಂತಹ ಮೆಸೇಜ್ ಏನೆಲ್ಲ ಅವಾಂತರ ಸೃಷ್ಠಿಸಿತು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಅದು ಮುಂದುವರೆದು ಒಂದಷ್ಟು ನಟಿಮಣಿಗಳಿಗೂ ಅದೇ ಫೇಕ್ ಐಡಿ ಮೂಲಕ ಮೆಸೇಜ್ ಹೋಗಿದ್ದು, ಒಬ್ಬಬ್ಬರಾಗಿಯೆ ಧ್ವನಿ ಎತ್ತುತ್ತಿದ್ದಾರೆ. ಅಂತೂ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕು.

- Advertisement -

Latest Posts

Don't Miss