‘ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ವ್ಯವಹಾರ ನಡೆದಿದೆ’ ಎಂಬ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ. ಅವರು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಪಪ್ರಚಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, 20 ಕೋಟಿ, 10 ಕೋಟಿ ಕೊಟ್ಟರು ಎಂಬುದು ಶುದ್ಧ ಸುಳ್ಳು. ಯಾರಿಂದಲೂ ನಾವು ಹಣ ತೆಗೆದುಕೊಂಡಿಲ್ಲ ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಫೇಸ್ಬುಕ್ನಲ್ಲಿ ಏನೇನೋ ಬರ್ತಾ ಇದೆ. ನಾವು ಯಾರನ್ನೂ ಹಣ ಕೇಳಿಲ್ಲ, ಯಾರೂ ಸಹ ಹಣ ಕೊಡುವಂತಿಲ್ಲ. ದುಡ್ಡಿನ ಬಗ್ಗೆ ಹರಿಯುತ್ತಿರುವ ಈ ಎಲ್ಲಾ ಸುದ್ದಿಗಳು ಸುಳ್ಳು. ದಯವಿಟ್ಟು ನಿಜ ಗೊತ್ತಿದ್ದರೆ ಮಾತ್ರ ಪೋಸ್ಟ್ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾ, ಅಂತೆ-ಕಂತೆ ಹಾಕಿ ಜನರ ದಿಕ್ಕು ತಪ್ಪಿಸಬೇಡಿ. 10 ಪೈಸೆಯನ್ನೂ ನಾವು ಪಡೆದುಕೊಂಡಿಲ್ಲ. ನಮ್ಮ ಮನೆತನದ ಗೌರವಕ್ಕೆ ಧಕ್ಕೆ ಬರಬಾರದು ಎಂಬ ಮೂಲಕ ಅಸತ್ಯಕ್ಕೆ ತಿರುಗೇಟು ನೀಡಿದ್ದಾರೆ.
ಸುಳ್ಳು ಸುದ್ದಿ ನಮ್ಮ ಮನಸ್ಸಿಗೆ ನೋವನ್ನುಂಟುಮಾಡುತ್ತಿದೆ. ಜನರಿಗೆ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಉಂಟಾಗುತ್ತಿದೆ. ದರ್ಶನ್ ಅಭಿಮಾನಿಗಳು ಮಾತನಾಡುವಾಗ ಸತ್ಯದ ಮೇಲೆ ನಿಂತು ಮಾತನಾಡಬೇಕು. ಫೇಸ್ಬುಕ್ ಈಗ ಫೇಕ್ ಬುಕ್ ಆಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ ಕಾಶಿನಾಥಯ್ಯ
ಹತ್ಯೆ ಪ್ರಕರಣದಲ್ಲಿ ಆರೋಪಿಯಾದ ನಟ ದರ್ಶನ್ಗೆ ಹೈಕೋರ್ಟ್ ಬೇಲ್ ನೀಡಿದಾಗ ಆತಂಕದ ವಾತಾವರಣವಿತ್ತು ಎಂಬುದನ್ನು ಒಪ್ಪಿಕೊಂಡ ಅವರು, ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದಾಗ ನಮಗೆ ತಾಳ್ಮೆಯ ಭರವಸೆ ಬರಲಾರಂಭಿಸಿತು. ಈಗ ದರ್ಶನ್ ಬೇಲ್ ರದ್ದಾಗಿದೆ. ಇದು ಸತ್ಯ ಶೋಧನೆಯ ದಿಕ್ಕಿನಲ್ಲಿ ನ್ಯಾಯ ವ್ಯವಸ್ಥೆಯ ಭರವಸೆಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.