ಕೊಪ್ಪಳ: ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ 10 ಕೋಟಿ ರೂ. ಮಂಜೂರಾತಿ ಆದೇಶದ ಪ್ರತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸ್ತಾಂತರ ಮಾಡಿದರು.
ಅವರು ಇಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ನಂತರ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಗವಿಸಿದ್ದೇಶ್ವರ ಮಠದ ಶ್ರೀಗಳು ಅಪಾರವಾದ ಸೇವೆಯನ್ನು ಮಾಡುತ್ತಿದ್ದಾರೆ. ಅವರಿಗೆ ಸಹಾಯ ಆಗಲಿ ಎಂದು ನಾವು ಸರ್ಕಾರದಿಂದ 10 ಕೋಟಿ ರೂ. ಕೊಟ್ಟಿದ್ದೇವೆ ಎಂದು ತಿಳಿಸಿದರು.
ಈ ಭಾಗದಲ್ಲಿ ಪರಮಪೂಜ್ಯರು ಮಾಡುತ್ತಿರುವ ವಿದ್ಯೆ ಮತ್ತು ಅನ್ನ ದಾಸೋಹ ಸೇವೆ ಬಹಳ ವರ್ಷಗಳಿಂದ ನಡೆದಿದೆ. ಬಡ ಜನರಿಗೆ, ವಿದ್ಯಾರ್ಥಿಗಳಿಗೆ ಆಶ್ರಯವಾಗಿದೆ. ಈ ಭಾಗದ ಜನರ ವಿದ್ಯೆಗೆ ನಂದಾದೀಪವಾಗಿದೆ. ಅಂತಹ ಅಮೋಘವಾಗಿರುವ ಕೆಲಸವನ್ನು ಪರಮಪೂಜ್ಯರು ಮಾಡುತ್ತಿರುವಂತಹದ್ದು, ನಮ್ಮ ನಾಡಿನ ಸೌಭಾಗ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಈ ಬಾರಿ ಎರಡು ವರ್ಷ ಕೋವಿಡ್ ಆಗಿರುವುದರಿಂದ ಒಂದೇ ಬಾರಿಗೆ 2,000 ಕ್ಕಿಂತ ಹೆಚ್ಚುವರಿಯಾಗಿ ಮಕ್ಕಳು ಬಂದಿದ್ದಾರೆ. 3,500 ಮಕ್ಕಳು ಈಗಾಗಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆಲ್ಲರಿಗೂ ಕೂಡ ವಸತಿ ಕಲ್ಪಿಸಬೇಕು. ದಾಸೋಹ ಕೇಂದ್ರಗಳನ್ನು ಮಾಡಬೇಕು ಎಂದು ಪರಮಪೂಜ್ಯರು ತಿಳಿಸಿದ್ದರು.
ಸಾಮಾನ್ಯವಾಗಿ ಭಕ್ತರಿಂದಲೇ ಎಲ್ಲವನ್ನು ಪರಮಪೂಜ್ಯರು ಮಾಡುತ್ತಾರೆ. ಈ ಸನ್ನಿವೇಶದ ಬಗ್ಗೆ ಸಂಸದ ಕರಡಿ ಸಂಗಣ್ಣ, ಸಚಿವ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಬಸವರಾಜ ಅವರು ತಿಳಿಸಿದ್ದರು. ಸಚಿವ ಆನಂದ ಸಿಂಗ್ ಅವರ ಒತ್ತಾಸೆಯ ಮೇರೆಗೆ ಕೂಡಲೇ 10 ಕೋಟಿ ರೂ. ಮಂಜೂರು ಮಾಡಲಾಗಿದೆ. ಆ ಆದೇಶವನ್ನು ಇವತ್ತು ಪರಮಪೂಜ್ಯರಿಗೆ ಇವತ್ತು ಹಸ್ತಾಂತರ ಮಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸರ್ಕಾರ ಸಹಾಯ ಮಾಡುತ್ತದೆ; ಭಕ್ತರು ಸಹಾಯ ಮಾಡಿ
ಮಠದಲ್ಲಿ ಹೆಚ್ಚುವರಿ ಮಕ್ಕಳು ವಿದ್ಯಾಭ್ಯಾಕ್ಕಾಗಿ ಬಂದಿದ್ದಾರೆ. ಅವರಿಗೆ ವಸತಿ ಸೌಲಭ್ಯ ಕೊಡುವುದು ಕಷ್ಟ ಆಗಿದ್ದು, ವಸತಿ ಕಲ್ಪಿಸುವ ಕೆಲಸವನ್ನು ಪರಮಪೂಜ್ಯರು ಆರಂಭ ಮಾಡಿದ್ದಾರೆ. ಅದಕ್ಕೆ ಸಹಾಯ ಆಗಲಿ ಅಂಥ ಸರ್ಕಾರದಿಂದ 10 ಕೋಟಿ ರೂ ಕೊಟ್ಟಿದ್ದೇವೆ. ಇನ್ನು ದೊಡ್ಡ ಪ್ರಮಾಣದಲ್ಲಿ 8 ರಿಂದ 10 ಸಾವಿರ ಮಕ್ಕಳಿಗೆ ವಸತಿ ನೀಡಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಭಕ್ತರು ಎಲ್ಲರೂ ಕೂಡ ಸಹಾಯ ಮಾಡಬೇಕು. ಈ ಭಾಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ದಿವ್ಯವಾಗಿರುವ ಸೇವೆ ಪರಮಪೂಜ್ಯರು ಮಾಡುತ್ತಿದ್ದಾರೆ. ಅವರ ಆಸೆ, ಕನಸು ನನಸು ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಹಾಲಪ್ಪ ಆಚಾರ, ಡಾ. ಕೆ. ಸುಧಾಕರ್, ಬೈರತಿ ಬಸವರಾಜ, ಸಿ.ಸಿ ಪಾಟೀಲ, ಸಂಸತ್ ಸದಸ್ಯರಾದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.




