ಕಾಂಗ್ರೆಸ್ನ ಪ್ರಬಲ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇತ್ತೀಚೆಗೆ ನೂತನ ಹೆಲಿಕಾಪ್ಟರ್ ಖರೀದಿಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳ ಚರ್ಚೆಗೆ ಕಾರಣವಾಗಿದೆ. ಶುಕ್ರವಾರ ಬೆಂಗಳೂರಿನ ಜಕ್ಕೂರು ಏರೋಡ್ರೋಮ್ನಲ್ಲಿ ಸಚಿವರು ಈ ಹೆಲಿಕಾಪ್ಟರ್ನ್ನು ಸ್ವತಃ ಪರಿಶೀಲಿಸಿದ್ದಾರೆ. ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಇದು ಬಹುಶಃ ಮುಂದಿನ ಎರಡು ತಿಂಗಳಲ್ಲಿ ನಮ್ಮೊಂದಿಗೆ ಹಾರಾಟಕ್ಕೆ ಸಿದ್ಧವಾಗಲಿದೆ ಎಂದಿದ್ದಾರೆ.
ಸತೀಶ್ ಜಾರಕಿಹೊಳಿ ಉತ್ತರ ಕರ್ನಾಟಕದಲ್ಲಿ ವೈಯಕ್ತಿಕ ಹೆಲಿಕಾಪ್ಟರ್ ಹೊಂದಿರುವ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿ ಅವ್ರು ಸಿಎಂ ಆಗಬೇಕು. ಸಿಎಂ ಆಗ್ತಾರೆ ಅನ್ನೋ ಕೂಗು ಕೇಳತೊಡಗಿತ್ತು. ಸದ್ಯ ಜಾರಕಿಹೊಳಿ ಹೆಲಿಕಾಪ್ಟರ್ ಖರೀದಿಸುತ್ತಿರೋದನ್ನ ನೋಡಿದರೆ ಅದು ನಿಜವಾಗುವುದರಲ್ಲಿ ಆಶ್ಚರ್ಯ ಇಲ್ಲ ಎಂಬಂತಾಗಿದೆ. ಇನ್ನು 2028ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಸಜ್ಜಾಗುತ್ತಿರುವ ಜಾರಕಿಹೊಳಿ, ತಮ್ಮ ಅಭಿಯಾನ ಹಾಗೂ ಸಂಘಟನೆ ಕಾರ್ಯಗಳನ್ನು ಇನ್ನಷ್ಟು ವೇಗವಂತಗೊಳಿಸಲು ಈ ಹೆಲಿಕಾಪ್ಟರ್ ನೆರವಾಗಲಿದೆ ಎನ್ನಲಾಗುತ್ತಿದೆ.
ಇತ್ತೀಚಿನ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಾಧುನಿಕ ಡಬಲ್ ಇಂಜಿನ್ ಹೊಂದಿರುವ ಹೆಲಿಕಾಪ್ಟರ್ ಇದಾಗಿದೆ. ಐದು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್ ಅನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಹೊಂದಿದೆ. ಈ ಹೆಲಿಕಾಪ್ಟರ್ ಎತ್ತರದಿಂದಲೂ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಸಾಮರ್ಥ್ಯವನ್ನು ಹೊಂದಿದೆ. ಇದು ಅಪಘಾತದ ಸಂದರ್ಭದಲ್ಲಿ ಅದರ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಇದಲ್ಲದೆ ಸುಧಾರಿತ ವೈರ್ಲೆಸ್ ಸಂವಹನ ವ್ಯವಸ್ಥೆಯನ್ನು ಸಹ ಹೊಂದಿದೆ.
ಸಚಿವರು ಹೆಲಿಕಾಪ್ಟರ್ ಪರಿಶೀಲಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿವೆ. ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕೆಲವರು ಈ ಕ್ರಮವನ್ನು ರಾಜಕೀಯ ಭವಿಷ್ಯಕ್ಕಾಗಿ ಮಾಡಿಕೊಂಡಿರುವ ತಯಾರಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಇದು ವ್ಯಾಪಾರದ ಭಾಗವೇ ಆಗಿರಬಹುದೆಂದು ವಿಶ್ಲೇಷಿಸುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ