ಬೆಳಗಾವಿ ಅಧಿವೇಶನವನ್ನು ಕೇವಲ 8 ದಿನಗಳ ಕಾಲ ನಡೆಸುವ ಬದಲು ಕನಿಷ್ಠ 20 ದಿನಗಳ ಕಾಲ ನಡೆಸಬೇಕೆಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಉತ್ತರ ಕರ್ನಾಟಕದ ಗಂಭೀರ ಸಮಸ್ಯೆಗಳ ಬಗ್ಗೆ ದೀರ್ಘ ಚರ್ಚೆಗೆ ಅವಕಾಶ ಇರಬೇಕು ಎಂದು ಹೇಳಿದ್ದಾರೆ.
ಬಿಜೆಪಿ–ಜೆಡಿಎಸ್ ಸಮನ್ವಯ ಸಮಿತಿ ಸಭೆ ಬಳಿಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಬಿಜೆಪಿ ಮತ್ತು ಜೆಡಿಎಸ್ ಹಲವಾರು ಹೋರಾಟಗಳಲ್ಲಿ ಒಂದಾಗಿ ಕೆಲಸ ಮಾಡಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮ ಮತ್ತು ಕಾಲ್ತುಳಿತ ಪ್ರಕರಣ ಮೊದಲಾದವುಗಳಲ್ಲಿ ನಾವು ಸರ್ಕಾರವನ್ನು ಕಣಗಟ್ಟಿದ್ದೇವೆ ಎಂದು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವು ಕೇವಲ ಬೆಂಗಳೂರು ಸಂಬಂಧಿತ ಮಸೂದೆಗಳನ್ನು ಮಾತ್ರ ತರಲು ಯತ್ನಿಸುತ್ತಿದೆ ಎಂದು ಅಶೋಕ್ ಆರೋಪಿಸಿದರು. ಹೀಗೆ ಮುಂದುವರಿದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಅಗತ್ಯವೇ ಇಲ್ಲ. ಹಿಂದಿನ ಬಾರಿ ಕೇವಲ ಕೆಲ ಗಂಟೆಗಳ ಚರ್ಚೆಯ ನಂತರ ಸಿಎಂ ಸಿದ್ದರಾಮಯ್ಯ ಕೆಲವು ಭರವಸೆಗಳನ್ನು ನೀಡಿದ್ದರು. ಆದರೆ ಇಂದಿಗೂ ಅವು ಈಡೇರಿಲ್ಲ ಎಂದು ಅವರು ಟೀಕಿಸಿದರು.
ಬಡವರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಈ ಮೂಲಕ ಗ್ಯಾರಂಟಿಗಳನ್ನು ತಪ್ಪಿಸಬಹುದು ಎಂದು ಸರ್ಕಾರ ಅಂದುಕೊಂಡಿದೆ. ಬಿಜೆಪಿ ಇದ್ದಾಗ ಬಗರ್ಹುಕುಂ ಸಾಗುವಳಿಗೆ ಮಂಜೂರಾತಿ ನೀಡಲಾಗಿತ್ತು. ಕಾಂಗ್ರೆಸ್ ಬಂದ ನಂತರ ಈ ಕೆಲಸ ಆಗಿಲ್ಲ. ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಜೈಲುಗಳಲ್ಲಿ ಮದ್ಯ ತಯಾರಿ ಕೇಂದ್ರ ಆರಂಭವಾಗಿದೆ.
ಭಯೋತ್ಪಾದಕ ಕೈದಿಗಳ ಕೈಗೆ ಮೊಬೈಲ್ ಬಂದಿದೆ. ಆದರೆ, ಗೃಹಸಚಿವರು ಈ ವೀಡಿಯೋ ಸೋರಿಕೆ ಮಾಡಿದವರನ್ನು ಪತ್ತೆ ಮಾಡಲು ಪ್ರಯತ್ನಿಸಿದ್ದಾರೆ. ಇಷ್ಟು ದಿನ ಕಳ್ಳರು ದರೋಡೆ ಮಾಡುತ್ತಿದ್ದರೆ, ಈಗ ಪೊಲೀಸರೇ ದರೋಡೆಗೆ ಇಳಿದಿದ್ದಾರೆ. ಹಗಲಿನಲ್ಲೇ ರಾಜಧಾನಿಯಲ್ಲಿ 7 ಕೋಟಿ ರೂ. ದರೋಡೆಯಾಗಿದೆ ಎಂದರು.
ವರದಿ : ಲಾವಣ್ಯ ಅನಿಗೋಳ



