PM ಮೋದಿ ಎದುರು ಬಾಹ್ಯಾಕಾಶ ಅನುಭವ ಬಿಚ್ಚಿಟ್ಟ ಶುಭಾಂಶು ಶುಕ್ಲಾ

ಭಾರತದ ಗಗನಯಾನ ಮಿಷನ್‌ ಬಗ್ಗೆ, ಇಡೀ ವಿಶ್ವಕ್ಕೆ ಆಸಕ್ತಿ ಹೆಚ್ಚಾಗಿದೆ. ವಿಜ್ಞಾನಿಗಳು ಇದರ ಭಾಗವಾಗಲು ಉತ್ಸುಕರಾಗಿದ್ದಾರೆ . ಹೀಗಂತ ಗಗನಯಾತ್ರಿ ಶುಭಾಂಶು ಶುಕ್ಲಾ ಭೇಟಿ ವೇಳೆ, ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ಕೊಟ್ಟ, ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ, ಶುಭಾಂಶು ಶುಕ್ಲಾ ಪಾತ್ರರಾಗಿದ್ದಾರೆ. ಭೂಮಿಗೆ ಮರಳಿದ ಬಳಿಕ ಮೊದಲ ಬಾರಿಗೆ ತಾಯ್ನಾಡಿಗೆ ಬಂದಿದ್ದಾರೆ. ಆಗಸ್ಟ್‌ 17ರಂದು ಭಾನುವಾರ ಮಧ್ಯರಾತ್ರಿ ದೆಹಲಿಗೆ ಬಂದಿಳಿದ ಶುಭಾಂಶು ಅವರಿಗೆ, ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಕೇಂದ್ರ ಸಚಿವ ಜಿತೇಂದ್ರ ಸಿಂಗ್‌, ದೆಹಲಿ ಸಿಎಂ ರೇಖಾ ಗುಪ್ತಾ ಬರಮಾಡಿಕೊಂಡಿದ್ರು.

ಬಳಿಕ ಪ್ರಧಾನಿ ಮೋದಿ ಅವರನ್ನು, ಶುಭಾಂಶು ಶುಕ್ಲಾ ಭೇಟಿಯಾಗಿದ್ದಾರೆ. ಈ ವೇಳೆ, ಬಾಹ್ಯಾಕಾಶ ಪ್ರಯಾಣ, ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಮತ್ತು ಕಕ್ಷೆಯ ಪ್ರಯೋಗಾಲಯದಲ್ಲಿ ನಡೆಸಿದ ಪ್ರಯೋಗಗಳ ಬಗ್ಗೆ, ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಶುಭಾಂಶು ಮಾತಿಗೆ ಪ್ರತಿಕ್ರಿಯಿಸಿರುವ ಮೋದಿ, 2040ರ ವೇಳೆಗೆ ಚಂದ್ರನ ಮೇಲೆ ತನ್ನದೇ ಆದ ಗಗನಯಾತ್ರಿಗಳನ್ನು, ಇಳಿಸುವ ಯೋಜನೆಯನ್ನು ಭಾರತ ಹೊಂದಿದೆ. ಭಾರತವು 2027ರಲ್ಲಿ ತನ್ನ ಮಾನವ ಬಾಹ್ಯಾಕಾಶ ಹಾರಾಟ ಹಾಗೂ 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಯೋಜನೆ ಮಾಡಲಾಗುವುದು. ಭಾರತದಿಂದ ಬಾಹ್ಯಾಕಾಶ ಯಾನಗಳಿಗೆ 40-50 ಗಗನಯಾತ್ರಿಗಳ ಗುಂಪನ್ನು, ಸಿದ್ಧಪಡಿಸುವ ಅವಶ್ಯಕತೆ ಇದೆ ಅಂತಾ ಹೇಳಿದ್ದಾರೆ.

ಆಗಸ್ಟ್‌ 18ರಂದು ನಡೆದ ಭೇಟಿ, ಮಾತುಕತೆ ಬಗೆಗಿನ ಫೋಟೋಗಳನ್ನು, ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಆಗಸ್ಟ್‌ 22, 23ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ, ಗಗನಯಾತ್ರಿ ಶುಭಾಂಶು ಶುಕ್ಲಾ ಭಾಗಿಯಾಗಲಿದ್ದಾರೆ.

About The Author