Tuesday, June 3, 2025

Latest Posts

ಸಸ್ಪೆಂಡ್‌ ಆಗಿದ್ದ ಎಂಎಲ್‌ಎಗಳಿಗೆ ಮತ್ತೆ ಖಾದರ್‌ ಪವರ್‌ : ಬಿಜೆಪಿ ಶಾಸಕರ ವನವಾಸ ಅಂತ್ಯಗೊಳಿಸಿದ ಸ್ಪೀಕರ್‌..!

- Advertisement -

ಬೆಂಗಳೂರು : ಕರ್ನಾಟಕ ವಿಧಾನಸಭೆಯಿಂದ 18 ಬಿಜೆಪಿ ಶಾಸಕರನ್ನು ಅನುಚಿತ ವರ್ತನೆ ತೋರಿದ್ದ ಕಾರಣಕ್ಕಾಗಿ ಅಮಾನತು ಮಾಡಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದರು. ಆದರೆ ಎರಡು ತಿಂಗಳ ಬಳಿಕ ನಡೆದ ಸಂಧಾನ ಸಭೆಯಲ್ಲಿ 18 ಬಿಜೆಪಿ ಶಾಸಕರ ಅಮಾನತನ್ನು ಸ್ಪೀಕರ್ ಯು.ಟಿ ಖಾದರ್ ಹಿಂಪಡೆದಿದ್ದಾರೆ. ರವಿವಾರ ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಯು.ಟಿ ಖಾದರ್ ನೇತೃತ್ವದಲ್ಲಿ, ಡೆಪ್ಯುಟಿ ಸ್ಪೀಕರ್‌ ರುದ್ದಪ್ಪ ಲಮಾಣಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಪ್ರಮುಖರ ಉಪಸ್ಥಿತಿಯಲ್ಲಿ ಸಂಧಾನಸಭೆ ನಡೆದಿದೆ.

ಸ್ಪೀಕರ್‌ ನೇತೃತ್ವದಲ್ಲಿ ನಡೆದ ಸಂಧಾನ ಸಭೆ..

ಸಭೆಯಲ್ಲಿ ತಮ್ಮ ಪಕ್ಷದ ಶಾಸಕರ ಅಮಾನತನ್ನು ರದ್ದುಪಡಿಸಿ ಅವರಿಗೆ ಎಲ್ಲರಂತೆ ಶಾಸನ ಸಭೆಯ ಕಾರ್ಯಕಲಾಪಗಳು ಹಾಗೂ ಸ್ಥಳೀಯ ಮಟ್ಟದಲ್ಲಿನ ಸಭೆಗಳಿಗೆ ತೆರಳಲು ಅನುವು ಮಾಡಿಕೊಡಬೇಕೆಂದು ಆರ್.‌ ಅಶೋಕ್‌ ಸ್ಪೀಕರ್‌ ಖಾದರ್‌ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಸಭೆಯಲ್ಲಿ ಆಡಳಿತ ಪಕ್ಷದ ನಾಯಕರ ಅಭಿಪ್ರಾಯಗಳನ್ನು ಆಲಿಸಿದರು. ಬಳಿಕ ಅಂತಿಮವಾಗಿ ಎಲ್ಲ 18 ಬಿಜೆಪಿ ಶಾಸಕರ ಅಮಾನತನ್ನು ವಾಪಸ್‌ ಪಡೆಯುವುದಾಗಿ ಸಭೆಯ ಗಮನಕ್ಕೆ ತಂದರು. ಅಲ್ಲದೆ ಇನ್ನು ಮುಂದೆ ಸದನದಲ್ಲಿ ಈ ರೀತಿಯಾಗಿ ಅಗೌರವದಿಂದ ನಡೆದುಕೊಳ್ಳುವುದನ್ನು ಮಾಡದಂತೆ ನೋಡಿಕೊಳ್ಳಬೇಕೆಂದು ವಿಪಕ್ಷ ನಾಯಕರಿಗೆ ಖಡಕ್‌ ತಾಕೀತು ಮಾಡಿದ್ದಾರೆ.

ಸಂತೋಷದಿಂದ ಶಾಸಕರ ಅಮಾನತು ಹಿಂಪಡೆದಿದ್ದೇನೆ..

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖಾದರ್‌, ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ಘಟನೆ ಬಗ್ಗೆ ಎಲ್ಲ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಕೂಡ ನನಗೆ ಮನವಿ ಸಹ ಸಲ್ಲಿಸಿದ್ದರು. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. 18 ಶಾಸಕರನ್ನು ಅಮಾನತು ಮಾಡಿ ಎರಡು ತಿಂಗಳಾಗಿದೆ. ಸಂತೋಷದಿಂದ ಶಾಸಕರ ಅಮಾನತು ಹಿಂಪಡೆದಿದ್ದೇನೆ. ಯಾವುದೇ ಷರತ್ತು ಇಲ್ಲ, ಎಲ್ಲರೂ ನಮ್ಮ ಮಿತ್ರರು. ಆ ಸಮಯದಲ್ಲಿ ದುರ್ನಡತೆ ತೋರಿದ್ದಕ್ಕೆ ಕ್ರಮ ಕೈಗೊಂಡಿದ್ದೆ. ಕ್ರಮ ತೆಗೆದುಕೊಳ್ಳುವುದಕ್ಕೆ ನನಗೆ ಅಧಿಕಾರವಿದೆ ಎಂದು ಸ್ಪೀಕರ್​ ಯು.ಟಿ.ಖಾದರ್​ ಹೇಳಿದ್ದಾರೆ.

ಅಲ್ಲದೆ ಅವರು ಮನುಷ್ಯರು, ನಮ್ಮ ಮಿತ್ರರು, ಅವರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲೂ ಮುಜುಗರವಾಗುತ್ತಿತ್ತು, ಇತರ ಶಾಸಕರಂತೆ ಸೌಲಭ್ಯಗಳು ಸಿಗದೆ ಅವರೆಲ್ಲ ತೊಂದರೆ ಅನುಭವಿಸುತ್ತಿದ್ದರು. ಯಾವುದೇ ಸಭೆಗಳಲ್ಲಿಯೂ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರ ತಪ್ಪು ಅವರಿಗೆ ಮನವರಿಕೆಯಾಗಿದೆ ಮುಂದೆ ಈ ರೀತಿಯಾಗಿ ಅಗೌರವ ತೋರದಂತೆ ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ಹೀಗೆ ಸದನದಲ್ಲಿ ಆಡಳಿತ ಪಕ್ಷವಷ್ಟೇ ಇರಬೇಕಾಗುತ್ತೆ..

ಇನ್ನೂ ಇದೇ ವಿಚಾರಕ್ಕೆ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ನಮ್ಮ ಶಾಸಕರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಅವರು ಆರು ತಿಂಗಳು ಅಮಾನತು ಮಾಡಿದ್ದು ಸರಿಯಲ್ಲ. ಹೀಗೆ ಆದರೆ ಸದನದಲ್ಲಿ ಆಡಳಿತ ಪಕ್ಷವಷ್ಟೇ ಇರಬೇಕಾಗುತ್ತದೆ. ಸಿಎಂ ಸಹ ಇದು ಇಲ್ಲಿಗೆ ಮುಗಿಯಬೇಕು ಎಂದು ತಿಳಿಸಿದ್ದಾರೆ. ಸ್ಪೀಕರ್ ಸಹ ಹಜ್ ಯಾತ್ರೆಗೆ ತೆರಳುತ್ತಿದ್ದಾರೆ. ಸದನ ಸರಿಯಾಗಿ ನಡೆಯಬೇಕೆಂದು ಸಕಾರಾತ್ಮಕ ಚರ್ಚೆ ಮಾಡಲಾಗಿದೆ. ಇದನ್ನು ಇಲ್ಲಿಗೆ ಅಂತ್ಯ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಸಿಎಂ ಸ್ಪೀಕರ್ ಕೂಡ ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಯಾವೆಲ್ಲ ಸೌಲಭ್ಯಗಳಿಗೆ ಕತ್ತರಿ ಹಾಕಲಾಗಿತ್ತು..?

ಅಲ್ಲದೆ ಅಮಾನತುಗೊಂಡಿದ್ದ ಶಾಸಕರಿಗೆ ಏನೆಲ್ಲ ಸೌಲಭ್ಯಗಳನ್ನು ತಡೆಹಿಡಿಯಲಾಗಿತ್ತು ಎನ್ನುವುದನ್ನು ನೋಡಿದಾಗ, ಅಮಾನತು ಅವಧಿಯಲ್ಲಿ ಶಾಸಕರು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿರಲಿಲ್ಲ. ಅಮಾನತುಗೊಂಡ ಸದಸ್ಯರಾಗಿರುವ ವಿಧಾನಮಂಡಲದ/ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿರಲಿಲ್ಲ. ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡುವಂತಿರಲ್ಲ. ಅಮಾನತ್ತಿನ ಅವಧಿಯಲ್ಲಿ ಶಾಸಕರು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ. ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಶಾಸಕರು ಮತದಾನ ಮಾಡುವಂತಿರಲಿಲ್ಲ. ಅಮಾನತ್ತಿನ ಅವಧಿಯಲ್ಲಿ ಶಾಸಕರು ಯಾವುದೇ ದಿನ ಭತ್ಯೆಯನ್ನು ಪಡೆಯಲು ಅರ್ಹರಿರಲಿಲ್ಲ.

ಯಾವ್ಯಾವ ಶಾಸಕರು ಅಮಾನತುಗೊಂಡಿದ್ದರು..?

ಮಲ್ಲೇಶ್ವರದ ಶಾಸಕ ಅಶ್ವಥ್ ನಾರಾಯಣ, ಯಲಹಂಕ ವಿಧಾನಸಭಾ ಕ್ಷೇತ್ರದ ಎಸ್.ಆರ್ ವಿಶ್ವನಾಥ್, ಆರ್‍ಆರ್ ನಗರ ಶಾಸಕ ಮುನಿರತ್ನ, ಕೆಆರ್ ಪುರದ ಶಾಸಕ ಬೈರತಿ ಬಸವರಾಜು, ತುಮಕೂರು ಗ್ರಾಮೀಣ ಶಾಸಕ ಸುರೇಶ್ ಗೌಡ, ಶಿವಮೊಗ್ಗದ ಶಾಸಕ ಕೆ.ಚನ್ನಬಸಪ್ಪ,, ಜಯನಗರದ ಶಾಸಕ ಸಿ.ಕೆ. ರಾಮಮೂರ್ತಿ ದೊಡ್ಡಬಳ್ಳಾಪುರದ ಶಾಸಕ ಧೀರಜ್ ಮುನಿರಾಜು, ಹರಿಹರದ ಶಾಸಕ ಬಿ.ಪಿ. ಹರೀಶ್, ಉಡುಪಿಯ ಶಾಸಕ ಯಶ್ಪಾಲ್ ಸುವರ್ಣ, ಮಂಗಳೂರು ಶಾಸಕ ಭರತ್ ಶೆಟ್ಟಿ, ಮೂಡುಬಿದರೆ ಶಾಸಕ ಉಮಾನಾಥ್ ಕೋಟ್ಯಾನ್, ಕುಂದಗೋಳದ ಎಂ.ಆರ್ ಪಾಟೀಲ್, ಬೀದರ್ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ, ಬಸವಕಲ್ಯಾಣ ಶಾಸಕ ಶರಣು ಸಲಗಾರ್, ಕಲಬುರಗಿ ಗ್ರಾಮೀಣ ಬಸವರಾಜ ಮತ್ತಿಮೂಡ್, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಹಾಗೂ ಕುಷ್ಟಗಿಯ ಶಾಸಕ ದೊಡ್ಡನಗೌಡ ಪಾಟೀಲ್ ಇವರುಗಳನ್ನು ಸ್ಪೀಕರ್‌ ಪೀಠಕ್ಕೆ ಅಗೌರವ ಹಾಗೂ ಸದನದಲ್ಲಿ ಅನುಚಿತ ವರ್ತನೆ ತೋರಿದ್ದ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಆದರೆ ಈ ನಿರ್ಧಾರವನ್ನು ಹಿಂಪಡೆಯಲಾಗಿದ್ದು, ಬಿಜೆಪಿ ಪಾಳಯದಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಿದೆ.

- Advertisement -

Latest Posts

Don't Miss