ಬಿ ಖಾತಾದಿಂದ ಎ ಖಾತಾ ಮಾಡುವ ರಾಜ್ಯ ಸರ್ಕಾರದ ಯೋಜನೆ, ಜನರನ್ನು ಮೋಸ ಮಾಡುವ ಬಹುದೊಡ್ಡ ಲೂಟಿ ಎಂದು, ಕೇಂದ್ರ ಸಚಿವ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಗುಡುಗಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ಡಿಕೆ, ಇದು ಸರ್ಕಾರದ 6ನೇ ಗ್ಯಾರಂಟಿ, ಜನತೆಗೆ ಟೋಪಿ ಹಾಕುವ ಯೋಜನೆ, ಈ ಯೋಜನೆಯಿಂದ ಜನರಿಗೆ ಅನುಕೂಲಕ್ಕಿಂತ ಹೊರೆಯೇ ಹೆಚ್ಚಾಗಲಿದೆ ಎಂದು ಆರೋಪಿಸಿದ್ದಾರೆ.
ಐದು ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಪಕ್ಷ, ಈಗಾಗಲೇ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿದೆ. ಈಗ A-ಖಾತಾ B-ಖಾತಾದಲ್ಲಿ ಜನರನ್ನು ಲೂಟಿ ಮಾಡಲು ಮುಂದಾಗಿದ್ದಾರೆ. ಬೆಸ್ಕಾಂನಲ್ಲಿ 3–4 ಲಕ್ಷ ಅರ್ಜಿಗಳು ಬಂದಿವೆ ಎಂದು ಹೇಳುತ್ತಾರೆ. ಆದರೆ ಇದರಿಂದ ಜನರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಸರ್ಕಾರ ಶೇಕಡ 5ರಷ್ಟು ಹೆಚ್ಚುವರಿ ಶುಲ್ಕ ಹೇರುತ್ತಿದೆ. ಇದು ಜನರಿಗೆ ಹೊರೆಯಾಗಲಿದೆ. ನಾನು ಓಪನ್ ಆಗಿಯೇ ಹೇಳುತ್ತಿದ್ದೀನಿ. ಇನ್ನೆರಡು ವರ್ಷ ಸುಮ್ನಿರಿ. ಎ ಖಾತಾ ಬಿ ಖಾತಾದ ಮೋಸದ ಬಲೆಗೆ ಬೀಳಬೇಡಿ ಎಂದು ರಾಜ್ಯದ ಜನರಿಗೆ ಕರೆ ನೀಡಿದ್ದಾರೆ.
ಬಿ ಖಾತಾ ಸಮಸ್ಯೆ 1995ರಿಂದಲೂ ಇದೆ. 1997ರಲ್ಲಿ ಈ ಬಗ್ಗೆ ಆದೇಶ ಹೊರಬಂದಿತ್ತು. ನಮ್ಮ ಆಡಳಿತದಲ್ಲಿ ನಗರಾಭಿವೃದ್ಧಿಗೆ ಹಲವಾರು ಕ್ರಮ ಕೈಗೊಂಡಿದ್ದೇವೆ. 7 ನಗರಸಭೆಗಳನ್ನು 9ಕ್ಕೆ ಏರಿಸಿದ್ದೇವೆ. 68 ವಾರ್ಡ್ಗಳನ್ನು 98ಕ್ಕೆ ವಿಸ್ತರಿಸಿದ್ದೇವೆ. 110 ಹಳ್ಳಿಗಳನ್ನು ಬಿಬಿಎಂಪಿಗೆ ಸೇರಿಸಿದ್ದೇವೆ. ಐದು ವರ್ಷಗಳಲ್ಲಿ ಸುಮಾರು 25 ಸಾವಿರ ಕೋಟಿ ಅನುದಾನ ತಂದಿದ್ದೆವು.
ಈ ದೀಪಾವಳಿ ಉಡುಗೊರೆಯಿಂದ ದಾರಿ ತಪ್ಪಬೇಡಿ. ನಿಮ್ ಮನೆ ಹಾಳು ಮಾಡಿಕೊಳ್ಳಬೇಡಿ. ಇಷ್ಟು ವರ್ಷವೇ ಕಾದಿದ್ದೀರಿ. ಸೈಟ್ ಮಾಡಿಸುವವನೇ ಬ್ಯಾಂಕ್ ಸಾಲವನ್ನೂ ಕೊಡಿಸುತ್ತಾನೆ. ಆ ಸಿಸ್ಟಮ್ ಕೂಡ ಇಲ್ಲಿದೆ. ಈ ಹಿಂದೆ ಹಲವಾರು ಸರ್ಕಾರಗಳಲ್ಲಿ ಅತ್ಯಂತ್ಯ ಕಡಿಮೆ ದರದಲ್ಲಿ, ನಿಮ್ಮ ಓನರ್ ಶಿಪ್ ಉಳಿಸಿಕೊಟ್ಟಿರುವುದು ಜನತಾ ದಳ ಸರ್ಕಾರ. ಈ ಚಾಲೆಂಜ್ ಅನ್ನು ಸ್ವೀಕಾರ ಮಾಡ್ತೇನೆ.
ತಾಲೂಕು ಮಟ್ಟದಲ್ಲಿ ಮಾಡ್ತಾರಂತೆ. ಸರ್ಕಾರದ ಖಜಾನೆ ತುಂಬಿಸಿಕೊಳ್ಳುವುದಕ್ಕೆ, ಅಲ್ಲೂ ಕೂಡ 1200 ಕೋಟಿ ನಿರೀಕ್ಷೆ ಮಾಡ್ತಿದ್ದಾರಂತೆ. ಈ ಸರ್ಕಾರ ಹಗಲು ದರೋಡೆ ಕೆಲಸ ಮಾಡ್ತಿದ್ದಾರೆ. ಇದಕ್ಕೆ ನೀವು ಮರುಳಾಗಬೇಡಿ. ನಿಮ್ಮನ್ನು ಉಳಿಸುವ ಜವಾಬ್ದಾರಿ ನಮ್ಮದು. ನಮ್ಮ ಸರ್ಕಾರ ಬರುತ್ತದೆ ತಲೆಕೆಡಿಸಿಕೊಳ್ಳಬೇಡಿ. ಹಿಂದಿನ ಸಿಸ್ಟಮ್ ಅನ್ನೇ ತರುತ್ತೇವೆ. ಸುಲಿಗೆ ಇಲ್ಲದೇ ಎಲ್ಲವನ್ನೂ ಸರಿಮಾಡುವುದು ನಮ್ಮ ಪಕ್ಷದ ಜವಾಬ್ದಾರಿ. ಹೀಂಗತ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

