ಬೆಂಗಳೂರಿನ ಇಸ್ಕಾನ್ ನಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ರಾಧಾಷ್ಟಮಿ ಉತ್ಸವ

ಬೆಂಗಳೂರು : ನಗರದ ಇಸ್ಕಾನ್ ದೇವಸ್ಥಾನದಲ್ಲಿ ರಾಧಾಷ್ಟಮಿಯು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ರಾಧಾರಾಣಿಯು ಇಡೀ ಜಗತ್ತಿನ ಮಾತೆ. ಈ ಶುಭ ದಿನದಂದು ಭಕ್ತರು ತಮಗೆ ಕೃಷ್ಣಭಕ್ತಿಯನ್ನು ಅನುಗ್ರಹಿಸಬೇಕೆಂದು ರಾಧಾರಾಣಿಯಲ್ಲಿ ಪ್ರಾರ್ಥಿಸಲಾಯಿತು.

ಈ ಶುಭ ಸಂದರ್ಭದಲ್ಲಿ ಶ್ರೀ ರಾಧಾ ಕೃಷ್ಣಚಂದ್ರ ಹೊಸ ವಸ್ತ್ರಗಳಿಂದ ಕಂಗೊಳಿಸುತ್ತಿದ್ದರು. ಪೂಜಾ ವೇದಿಕೆಯನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು.ದೇಶದ ಕ್ಷೇಮ ಮತ್ತು ಶಾಂತಿಗಾಗಿ ಇಂದು ಬೆಳಿಗ್ಗೆ ರಾಧಾ ಸಹಸ್ರನಾಮ ಹೋಮವನ್ನು ನೆರವೇರಿಸಲಾಯಿತು.

ಶ್ರೀ ರಾಧಾ ಕೃಷ್ಣಚಂದ್ರ ಉತ್ಸವ ಮೂರ್ತಿಗಳಿಗೆ ಸಂಜೆ ವೈಭವದ ಅಭಿಷೇಕ ಮಾಡಲಾಯಿತು. ಭಕ್ತರು ಕೀರ್ತನೆಗಳನ್ನು ಮತ್ತು ವೈಷ್ಣವ ಆಚಾರ್ಯರು ರಚಿಸಿರುವ ಅಪೂರ್ವ ಗೀತೆಗಳನ್ನು ಹಾಡಿ ರಾಧಾರಾಣಿಯನ್ನು ಕೊಂಡಾಡಿದರು.

ವಿಗ್ರಹಗಳಿಗೆ ಹಾಲು, ಮೊಸರು, ತುಪ್ಪ, ಮಧು ಮತ್ತು ಬೆಲ್ಲದ ನಿರಿನಿಂದ ಅಭಿಷೇಕ ಮಾಡಲಾಯಿತು. ಅನಂತರ ಖರ್ಬೂಜ, ಕಲ್ಲಂಗಡಿ ಹಣ್ಣು, ಸೇಬು, ಅನಾನಸ್, ದಾಳಿಂಬೆ, ಕಿತ್ತಳೆ, ಮೂಸಂಬಿ, ಪಪಾಯ, ದ್ರಾಕ್ಷಿ ಮುಂತಾದ ಹಣ್ಣುಗಳ ರಸದಿಂದ ವೈಭವದ ಅಭಿಷೇಕ ನಡೆಯಿತು.

ಶ್ರೀ ರಾಧಾ ಕೃಷ್ಣಚಂದ್ರರಿಗೆ ಸುದೀರ್ಘವಾದ ಆರತಿಯನ್ನು ಮಾಡಲಾಯಿತು. ಆರತಿಯ ನಂತರ ವಿಗ್ರಹಳಿಗೆ 108 ಕಳಶಗಳ ಜಲದಿಂದ ಪವಿತ್ರ ಸ್ನಾನ ಮಾಡಿಸಲಾಯಿತು. ಇದಾದ ಮೇಲೆ ಪುಷ್ಟವೃಷ್ಟಿ ನಡೆಯಿತು. ಅಭಿಷೇಕದ ನಂತರ ಶ್ರೀ ರಾಧಾ ಕೃಷ್ಣಚಂದ್ರರಿಗೆ ಛಪ್ಪನ್ ಭೋಗ್ (56 ಭಕ್ಷಗಳು) ಅರ್ಪಿಸಲಾಯಿತು. ಅಲ್ಲದೆ 108 ಕೇಕ್ಗಳನ್ನೂ ಅರ್ಪಿಸಿ ಬಂದ ಭಕ್ತರಲ್ಲಿ ವಿತರಿಸಲಾಯಿತು.

ಭವ್ಯವಾದ ಶಯನ ಉತ್ಸವದೊಂದಿಗೆ ರಾಧಾಷ್ಟಮಿಯು ಸಮಾಪ್ತಗೊಂಡಿತು.

About The Author