www.karnatakatv.net: ಮೈಸೂರು: ಚಿತ್ರ ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಬಹುಮುಖ ವ್ಯಕ್ತಿತ್ವದ ಪುನೀತ್ ಅಗಲಿಕೆ ದುರಾದೃಷ್ಟಕರ. ಪುನೀತ್ ಸಾವಿನ ಸುದ್ದಿ ವಿಷಾದನೀಯ, ಆಶ್ಚರ್ಯ ಸಂಗತಿ. ಮೊನ್ನೆ ಅವರ ಸಹೋದರನ ಕಾರ್ಯಕ್ರಮದಲ್ಲಿ ಎಲ್ಲರೂ ಡ್ಯಾನ್ಸ್ ಮಾಡಿದರು ಅಂತ ಕೇಳಿದ್ದೆ, ಆ ಸಂತೋಷದ ಕ್ಷಣ ಮನಸ್ಸಿನಿಂದ ಹೋಗುವ ಮುನ್ನ ಭೌತಿಕವಾಗಿ ಅಗಲಿರೋದು ಆಶ್ಚರ್ಯದ ಸಂಗತಿ.
ಪುನೀತ್ ರಾಜ್ ಕುಮಾರ್ ಒಬ್ಬ ಪ್ರತಿಭಾನ್ವಿತ ಕಲಾವಿದ ಎಂದರು. 1980ರ ದಶಕದಲ್ಲಿ ಮಠದಿಂದ ಡಾ.ರಾಜ್ಕುಮಾರ್ ಅವರಿಗೆ ಸನ್ಮಾನ ಹಮ್ಮಿಕೊಂಡಿದ್ದವು. ಆಗ ಚಿಕ್ಕವರಿದ್ದ ಪುನೀತ್ ರಾಜ್ ಕುಮಾರ್ ಸೋಫಾ ಏರೋದು. ಇಳಿಯೋದು ಮಾಡುತ್ತಿದ್ದರು. ಪಾರ್ವತಮ್ಮನವರು ಕಂಟ್ರೋಲ್ ಮಾಡೋಕೆ ಕಷ್ಟಪಡ್ತಿದ್ರು. ಹಿರಿಯ ಶ್ರೀಗಳು ಬಿಡಿ ಅವನು ತುಂಬಾ ಆಕ್ಟೀವ್ ಇದ್ದಾನೆ, ಆಟ ಆಡಲಿ ಅಂತ ಹೇಳಿದರು. ಆ ಕ್ಷಣವನ್ನ ನಾವು ಮರೆಯಲು ಸಾಧ್ಯವಿಲ್ಲ ಎಂದು ಶ್ರೀಗಳು ನೆನೆಸಿಕೊಂಡರು.
ದೊಡ್ಡ ಕಲಾವಿದರಾದರೂ ತಂದೆಯoತೆ ನಯ, ವಿನಯ ಸದ್ಗುಣ ಬೆಳೆಸಿಕೊಂಡಿದ್ದರು. ನಾನು ದುಬೈ ಕಾರ್ಯಕ್ರಮವೊಂದಕ್ಕೆ ಹೋಗಿ ಬಂದಿಳಿದಾಗ ಏರ್ಪೋರ್ಟ್ ನಲ್ಲಿ ಭಕ್ತರು ನಮಸ್ಕರಿದರು. ಆಗ ಭಕ್ತರ ಸಾಲಿನಲ್ಲಿ ಪುನೀತ್ ಕೂಡ ಇದ್ದರು. ನಮ್ಮ ಮಠದ ಬಗ್ಗೆ ಅಪಾರ ಭಕ್ತಿ, ಗೌರವ ಇಟ್ಟುಕೊಂಡಿದ್ದರು. ಒಳ್ಳೆ ವಾಗ್ಮಿ, ಅಮಿತಾಬ್ ಬಚ್ಚನ್ ರಂತೆ ಕನ್ನಡದಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸುತ್ತಿದ್ದರು. ಚೆನ್ನಾಗಿ ಅಧ್ಯಯನ ಮಾಡುತ್ತಿದ್ದರು, ವಿಷಯ ಗ್ರಹಿಸುತ್ತಿದ್ದರು. ಹೀಗೆ ಬಹುಮುಖ ವ್ಯಕ್ತಿತ್ವದ ಪುನೀತ್ ಅಗಲಿಕೆ ದುರಾದೃಷ್ಟ. ಡಾ.ರಾಜ್ ಕುಟುಂಬದ ಕುಡಿ ಇಲ್ಲದಂತಾಗಿದೆ ಎಂದು ಸಂತಾಪ ಸೂಚಿಸಿದರು.
ಪ್ರಸಾದ್, ಕರ್ನಾಟಕ ಟಿವಿ- ಮೈಸೂರು




