ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಲಕ್ಷ ಲಕ್ಷ ಉದ್ಯೋಗ ಸೃಷ್ಠಿಸುತ್ತೇವೆ ಅಂತ ಹೇಳಿದ್ರು, ಅಲ್ಲದೇ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಮೋದಿ ಪ್ರಧಾನಿಯಾಗಿ ಎಂಟು ವರ್ಷವಾಯ್ತು. ಅಲ್ಲಿಗೆ ಹದಿನಾರು ಕೋಟಿ ಉದ್ಯೋಗ ಸೃಷ್ಟಿಸಬೇಕಾಗಿತ್ತು. ಅದ್ಯಾವುದನ್ನ ಮಾಡಲಿಲ್ಲ ಎಂಬುದಾಗಿ ಮೋದಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಯುವಕರಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆ ತರುವ ಶಕ್ತಿ ಇದೆ. ದೇಶದಲ್ಲಿ ಕೇವಲ ಶೇ.೩೮ರಷ್ಟು ಮಂದಿಗೆ ಮಾತ್ರ ಉದ್ಯೋಗವಕಾಶ ಇದೆ. ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜಗತ್ತಿನ ಯಾವ ದೇಶದಲ್ಲೂ ಇಷ್ಟೊಂದು ಯುವ ಶಕ್ತಿ ಇಲ್ಲ. ದೇಶದಲ್ಲಿ ಅಷ್ಟರಮಟ್ಟಿಗೆ ಯುವಶಕ್ತಿ ಇದೆ. ದುರಾದೃಷ್ಟವಶಾತ್ ಯುವಶಕ್ತಿಯನ್ನ ಬೆಳೆಸಿಕೊಳ್ಳುತ್ತಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಯುವ ಶಕ್ತಿಯನ್ನ ಬಳಸಿಕೊಳ್ಳುವ ಕೆಲಸ ಆಗುತ್ತಿಲ್ಲ. ಯುವ ಶಕ್ತಿ ನಿಜಕ್ಕೂ ದುರುಪಯೋಗವಾಗುತ್ತಿದೆ. ನಿರುದ್ಯೋಗ ದಿನೇ ದಿನೇ ಹೆಚ್ಚುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ. ಮೋದಿ ಸರ್ಕಾರವನ್ನ ಖಂಡಿಸುವ ಕೆಲಸವನ್ನ ಯುವಕರು ಮಾಡಬೇಕಿದೆ ಎಂದರು.
ಬಿಜೆಪಿಯ ಸುಬ್ರಹ್ಮಣ್ಯ ಸ್ವಾಮಿ ಟ್ವೀಟ್ ಮಾಡಿದ್ದಾರೆ. 2011ರಲ್ಲಿ ಆರ್ಥಿಕತೆಯಲ್ಲಿ ದೇಶ ಮೂರನೇ ಸ್ಥಾನದಲ್ಲಿತ್ತು. 2021-22ರಲ್ಲಿ 164ನೇ ಸ್ಥಾನದಲ್ಲಿದೆ ಅಂತಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಾರಣ ಮೋದಿಯವರ ಕೆಟ್ಟ ಆರ್ಥಿಕ ನೀತಿಯಾಗಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಮೋದಿ ಪ್ರಧಾನಿಯಾಗಿ ಎಂಟು ವರ್ಷವಾಯ್ತು. ಅಲ್ಲಿಗೆ ಹದಿನಾರು ಕೋಟಿ ಉದ್ಯೋಗ ಸೃಷ್ಟಿಸಬೇಕಾಗಿತ್ತು. ಅದ್ಯಾವುದನ್ನ ಮಾಡಲಿಲ್ಲ ಎಂದು ಗುಡುಗಿದರು.