www.karnatakatv.net : ಗುಂಡ್ಲುಪೇಟೆ : ಕೇರಳದಿಂದ ಆಗಮಿಸುವ ಕೆಲ ಪ್ರಯಾಣಿಕರು ರಾಜ್ಯದೊಳಗೆ ಪ್ರವೇಶಿಸಲು ನಕಲಿ ಆರ್ ಟಿಪಿಸಿಆರ್ ವರದಿಯನ್ನು ತರುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಇಂತಹವರ ವಿರುದ್ದ ಕೂಡಲೇ ಕ್ರಮಿನಲ್ ಮೊಕದ್ದಮೆ ದಾಖಲಿಸುವ ಜೊತೆಗೆ ಅವರ ವಾಹನಗಳನ್ನು ಸ್ಥಳದಲ್ಲಿಯೇ ಜಪ್ತಿ ಮಾಡಬೇಕೆಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಅವರು ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ಗೆ ಇಂದು ಭೇಟಿ ನೀಡಿ, ಕೋವಿಡ್ ಶಿಷ್ಟಾಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ,ಸಲಹೆ ಸೂಚನೆಗಳನ್ನು ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕೇರಳ ರಾಜ್ಯದಿಂದ ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ಕರ್ನಾಟಕ ರಾಜ್ಯದೊಳಗೆ ಪ್ರವೇಶಿಸಲು ನಕಲಿ ಆರ್ಟಿಪಿಸಿಆರ್ ವರದಿಗಳನ್ನು ತರುತ್ತಿರುವುದು ಚೆಕ್ ಪೋಸ್ಟ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು,ಅವರನ್ನು ಹಿಂತಿರುಗಿಸಿ ಕಳುಹಿಸುತ್ತಿದ್ದಾರೆ.ಇದನ್ನು ರಾಜ್ಯ ಸರ್ಕಾರವು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ನಕಲಿ ಆರ್ಟಿಪಿಸಿಆರ್ ವರದಿಹೊಂದಿರುವವರ ವಿರುದ್ದ ಕೂಡಲೇ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವ ಜೊತೆಗೆ ಸ್ಥಳದಲ್ಲೇ ಜಪ್ತಿ ಮಾಡುವಂತೆ ಸ್ಥಳದಲ್ಲಿದ್ದ ಚೆಕ್ ಪೋಸ್ಟ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಡಿಎಚ್ಒ ಎಂ.ಸಿ.ರವಿ, ಎಎಸ್ಪಿ ಸುಂದರ್ ರಾಜ್, ಬಂಡೀಪುರ ಹುಲಿ ಸಂರಕ್ಷಿತ ಹುಲಿ ಯೋಜನೆ ನಿರ್ದೇಶಕ ನಟೇಶ್,ಡಾ.ಸೋಮಣ್ಣ, ತಹಸಿಲ್ದಾರ್ ರವಿಶಂಕರ್ ಸೇರಿದಂತೆ ಇತರರು ಇದ್ದರು.
ಕರ್ನಾಟಕ ಟಿವಿ ಗುಂಡ್ಲುಪೇಟೆ