ತಮಿಳುನಾಡು: ಜುಲೈ.12ರಂದು 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲಾ ಶಿಕ್ಷಕರನ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಳು. ಈ ಘಟನೆಯ ಸಂಬಂಧ ಇಂದು ಶಾಲಾ ಆವರಣದ ಮುಂದೆ ಪ್ರತಿಭಟನೆಯನ್ನು ಪೋಷಕರು ನಡೆಸುತ್ತಿದ್ದರು. ಪ್ರತಿಭಟನೆ ವಿಕೋಪಕ್ಕೆ ತಿರುಗಿ, ಶಾಲಾ ಆವರಣಕ್ಕೆ ನುಗ್ಗಿದಂತ ಪೋಷಕರು, ಶಾಲೆಯ ಕಿಟಕಿ ಬಾಗಿಲು ಹೊಡೆದು ಹಾಕಿ, ಶಾಲಾ ಬಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿರೋ ಘಟನೆ ನಡೆದಿದೆ.
ಕಲ್ಲಕುರಿಚಿ ಜಿಲ್ಲೆಯ ಚಿನ್ನಸಾಲೆಮ್ ಬಳಿಯ ಖಾಸಗಿ ಶಾಲೆಯ ವಿದ್ಯಾರ್ಥಿನಿ ಶ್ರೀಮತಿ ಅವರ ಸಾವಿನ ವಿರುದ್ಧ ನಡೆದ ಪ್ರತಿಭಟನೆ ದೊಂಬಿಯಾಗಿ ಮಾರ್ಪಟ್ಟಿದೆ. ಇದರಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಶಾಲಾ ಆವರಣದಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನ ಮತ್ತು ವಾಹನಗಳನ್ನು ಜಖಂಗೊಳಿಸಿ ಬೆಂಕಿ ಹಚ್ಚಿದರು. ಬಾಲಕಿಯ ಸಾವಿನಲ್ಲಿ ಏನಾಯಿತು ಎಂಬುದರ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಮುಖ್ಯ ಶಿಕ್ಷಣಾಧಿಕಾರಿಗೆ ನಿರ್ದೇಶನ ನೀಡಿದೆ.
ಈ ನಡುವೆ ಕಲ್ಲಕುರಿಚಿ ಮತ್ತು ಚಿನ್ನಾ ಸೇಲಂ ತಾಲೂಕುಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 17 ಜುಲೈ 2022ರವರೆಗೆ ಮುಂಜಾಗ್ರತಾ ಕ್ರಮವಾಗಿ ಕಲ್ಲಕುರಿಚಿ ಮತ್ತು ಚಿನ್ನ ಸೇಲಂ ತಾಲ್ಲೂಕುಗಳಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.