www.karnatakatv.net: ಇನ್ಮುoದೆ ಕೋರ್ಟ್ ನಲ್ಲಿ ಆರೋಪಿಗಳಿಗೆ ವಕೀಲರು ತಮ್ಮಿಷ್ಟದ ಹಾಗೆ ಪ್ರಶ್ನೆ ಕೇಳುವಂತಿಲ್ಲ. ಹೌದು ರಾಜ್ಯದಲ್ಲಿ ಈ ಹೊಸ ನಿಯಮವನ್ನು ಕರ್ನಾಟಕ ಹೈಕೋರ್ಟ್ ಜಾರಿಗೆ ತಂದಿದೆ. ಅಪರಾಧ ಪ್ರಕರಣಗಳ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯಗಳು ಸೂಕ್ತ ರೀತಿಯಲ್ಲಿ ಪ್ರಶ್ನಾವಳಿ ತಯಾರಿಸದೇ ಇರೋದ್ನ ಗಮನಿಸಿರೋ ಉಚ್ಛನ್ಯಾಯಾಲಯ, ಪ್ರಶ್ನಾವಳಿ ರಚನೆ ಕುರಿತಾಗಿ ಯಾವೆಲ್ಲಾ ಕ್ರಮ ಅನುಸರಿಸಬೇಕೆಂಬ ಬಗ್ಗೆ ಸದ್ಯ ಮಾರ್ಗಸೂಚಿ ಹೊರಡಿಸಿದೆ.
ಹೌದು, ಆರೋಪಿಗಳ ವಿಚಾರಣೆ ಕುರಿತಾಗಿ ಕರ್ನಾಟಕ ಹೈಕೋರ್ಟ್ ಹೊಸದೊಂದು ಮಾರ್ಗಸೂಚಿ ಹೊರಡಿಸಿದೆ. ಕೊಲೆ ಪ್ರಕರಣವೊಂದರ ಆರೋಪಿಗಳಿಬ್ಬರಿಗೆ ವಿಚಾರಣಾ ನ್ಯಾಯಾಲಯ ಸೂಕ್ತ ರೀತಿಯ ಪ್ರಶ್ನೆಗಳನ್ನು ಕೇಳದೆ ಮತ್ತು ಅವರಿಗೆ ವಿವರಣೆ ನೀಡೋದಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ.
ಇನ್ನು ಆರೋಪಿಗಳ ಪ್ರಶ್ನಾವಳಿ ಕುರಿತಾಗಿ ನ್ಯಾಯಾಲಯ ಹೊರಡಿಸಿರೊ ಹೊಸ ಮಾರ್ಗಸೂಚಿ ಬಗ್ಗೆ ಹೇಳೋದಾದ್ರೆ,
• ಸುಲಭಾಗಿ ಅರ್ಥವಾಗೋ ಶಬ್ಧಗಳನ್ನು ಬಳಸಿ ಸಾಧ್ಯವಾದಷ್ಟೂ ಮಟ್ಟಿಗೆ ಚಿಕ್ಕ ವಾಕ್ಯಗಳಲ್ಲಿ ಪ್ರಶ್ನೆ ಸಿದ್ಧಪಡಿಸಬೇಕು.
• ಪ್ರಶ್ನೆಯನ್ನು ಕೇಳಿ ಉತ್ತರ ನಮೂದಿಸಿಕೊಳ್ಳುವ ಬದಲು ಪ್ರಶ್ನೆಗೆ ಲಿಖಿತ ಉತ್ತರ ದಾಖಲಿಸಲು ಆರೋಪಿಗೆ ಸೂಚಿಸಬಹುದು.
• ಮೌಖಿಕ ಹಾಗೂ ಲಿಖಿತ ಸಾಕ್ಷ್ಯಾಧಾರಗಳಿಂದ ದೋಷಾರೋಪ ಸಾಕ್ಷ್ಯಗಳನ್ನು ಮಾತ್ರ ಆಯ್ಕೆ ಮಾಡಬಹುದು.
• ಎರಡು ಅಥವಾ ಅದಕ್ಕಿಂತ ಹೆಚ್ಚು ಸಾಕ್ಷಿದಾರರು ಆರೋಪಿಗಳ ಕೃತ್ಯದ ಬಗ್ಗೆ ಸಾಮೂಹಿಕ ಸಾಕ್ಷ್ಯ ಹೇಳೋ ಸಂದರ್ಭದಲ್ಲಿ ಒಂದೇ ಪ್ರಶ್ನೆ ಕೇಳಬಹುದು.
• ಸಾಕ್ಷಿದಾರ ಕೆಲವೊಮ್ಮೆ ಇಬ್ಬರಿಗಿಂತ ಹೆಚ್ಚು ಆರೋಪಿಗಳ ಕೃತ್ಯದ ಬಗ್ಗೆ ಸಾಕ್ಷ್ಯ ಹೇಳುವಾಗ ಒಂದೇ ಪ್ರಶ್ನೆ ಸಿದ್ದಪಡಿಸಬೇಕು.
• ಇನ್ನು ಪ್ರತಿಯೊಬ್ಬ ಆರೋಪಿಯನ್ನು ವೈಯಕ್ತಿಕವಾಗಿ ಪ್ರಶ್ನಿಸಿ, ಅವರ ಉತ್ತರ ಪ್ರತ್ಯೇಕವಾಗಿ ದಾಖಲಿಸಬೇಕು.
• ದೋಷಾರೋಪಣೆಗಳು ಇರುವ ಸಂದರ್ಭದಲ್ಲಿ ಪಟ್ಟಿ ಮಾಡಲಾಗಿರುವ ದಾಖಲೆ ಮತ್ತು ವಸ್ತುಗಳ ಕುರಿತು ಆರೋಪಿಗಳ ಗಮನ ಸೆಳೆಯಬೇಕು.
• ಔಪಚಾರಿಕ ಸಾಕ್ಷಿಗಳು ನೀಡಿದ ಸಾಕ್ಷ್ಯದ ಬಗ್ಗೆ ಆರೋಪಿಯನ್ನು ಪ್ರಶ್ನೆ ಮಾಡುವ ಅಗತ್ಯವಿಲ್ಲ ಅಂತ ಹೈಕೋರ್ಟ್ ಹೇಳಿದೆ. ಇನ್ನು ಆರೋಪಿ ನೀಡಿದ ಉತ್ತರ ಮತ್ತು ವಿವರಣೆಯನ್ನು ವಿಚಾರಣಾ ನ್ಯಾಯಾಲಯ ದಾಖಲಿಸಿಕೊಳ್ಳಬೇಕೆ ಹೊರತು, ಸುಳ್ಳು ಮತ್ತು ಸತ್ಯ ಎಂಬುದಾಗಿ ಏಕ ಪದದಲ್ಲಿ ಉತ್ತರ ನೀಡುವಂತೆ ಆರೋಪಿಗೆ ಸೂಚಿಸಬಾರದು ಅಂತಾನೂ ಹೈಕೋರ್ಟ್ ನಿರ್ದೇಶಿಸಿದೆ. ರಾಜ್ಯ ನ್ಯಾಯಾಂಗ ಅಕಾಡೆಮಿ ಮಾದರಿ ಪ್ರಶ್ನಾವಳಿ ಸಿದ್ಧಪಡಿಸಿ ಮಾರ್ಗದರ್ಶನಕ್ಕಾಗಿ ಎಲ್ಲಾ ವಿಚಾರಣಾ ನ್ಯಾಯಾಲಯಗಳಿಗೆ ರವಾನಿಸಬೇಕೆಂದು ಹೈಕೋರ್ಟ್ ತಿಳಿಸಿದೆ.